ಟಿಕೆಟ್ರಹಿತ ಪ್ರಯಾಣಿಕರನ್ನು ಸಾಗಿಸುವುದು ಗಂಭೀರ ದುರ್ವರ್ತನೆ: ಬಸ್ ನಿರ್ವಾಹಕರ ವಜಾ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಟಿಕೆಟ್ರಹಿತ ಪ್ರಯಾಣಿಕರನ್ನು ಸಾಗಿಸುವುದು ಗಂಭೀರ ದುರ್ವರ್ತನೆ: ಬಸ್ ನಿರ್ವಾಹಕರ ವಜಾ ಆದೇಶ ಎತ್ತಿ ಹಿಡಿದ ಹೈಕೋರ್ಟ್
59 ಪ್ರಯಾಣಿಕರನ್ನು ಟಿಕೆಟ್ ನೀಡದೆ ಸಾಗಿಸಿ, ಅದರ ಕುರಿತು ಯಾವುದೇ ಸಮಂಜಸವಾದ ಸ್ಪಷ್ಟನೆ ನೀಡಲು ವಿಫಲವಾದ ಬಸ್ ನಿರ್ವಾಹಕರನ್ನು ಸೇವೆಯಿಂದ ವಜಾಗೊಳಿಸಿದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿದೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸೌರಭ್ ಶಾಮ್ ಶಂಶೇರಿ ಅವರಿದ್ದ ಏಕಸದಸ್ಯ ಪೀಠವು, ಟಿಕೆಟ್ ಇಲ್ಲದೆ ಪ್ರಯಾಣಿಕರನ್ನು ಸಾಗಿಸುವುದು ಗಂಭೀರ ದುರ್ವರ್ತನೆಗೆ ಸಮಾನವೆಂದು ಅಭಿಪ್ರಾಯಪಟ್ಟು ಈ ತೀರ್ಪು ನೀಡಿದೆ.
ಈ ಕುರಿತು ಸೇವೆಯಿಂದ ವಜಾಗೊಂಡ ನಿರ್ವಾಹಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ನ್ಯಾಯಪೀಠ,
“ಶಿಸ್ತಿನ ಕ್ರಮಗಳ ವಿಚಾರದಲ್ಲಿ ಈ ನ್ಯಾಯಾಲಯವು ಮೇಲ್ಮನವಿ ನ್ಯಾಯಾಲಯದಂತೆ ಕುಳಿತು ಸಾಕ್ಷ್ಯವು ಸಮರ್ಪಕವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಾಧ್ಯವಿಲ್ಲ; ತೀರ್ಮಾನಗಳು ಸಂಪೂರ್ಣ ವಿಚಿತ್ರವಾಗಿರುವ ಸಂದರ್ಭದಲ್ಲಷ್ಟೇ ಹಸ್ತಕ್ಷೇಪ ಮಾಡಬಹುದು. ಪ್ರಸ್ತುತ ಪ್ರಕರಣದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಟಿಕೆಟ್ ನೀಡದೆ ಪ್ರಯಾಣಿಕರನ್ನು ಸಾಗಿಸುವುದು ಗಂಭೀರ ದುರ್ವರ್ತನೆ. ಪ್ರಯಾಣಿಕರಿಗೆ ಟಿಕೆಟ್ ನೀಡದೆ ಮುಂಚಿತವಾಗಿಯೇ ಪೇ-ಬಿಲ್ಗಳನ್ನು ಹೇಗೆ ತುಂಬಿದರು ಎಂಬುದಕ್ಕೆ ಅರ್ಜಿದಾರರು ಯಾವುದೇ ಸಮಂಜಸವಾದ ಕಾರಣ ನೀಡಿಲ್ಲ. ಆದ್ದರಿಂದ ಸೀಮಿತ ರಿಟ್ ನ್ಯಾಯವ್ಯಾಪ್ತಿಯಲ್ಲಿ ಪ್ರಶ್ನಿತ ಆದೇಶದಲ್ಲಿ ಹಸ್ತಕ್ಷೇಪಿಸಲು ಕಾರಣ ಕಂಡುಬರುವುದಿಲ್ಲ.”
ಪ್ರಕರಣದ ಹಿನ್ನೆಲೆ;
ಅರ್ಜಿದಾರರು ಪ್ರತಿವಾದಿ ನಿಗಮದಲ್ಲಿ ಬಸ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಫೈಜಾಬಾದ್ನಿಂದ ಅಕ್ಬರ್ಪುರಕ್ಕೆ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಪಾಸಣೆ ನಡೆಸಲಾಗಿದ್ದು, 59 ಪ್ರಯಾಣಿಕರಿಗೆ ಟಿಕೆಟ್ ನೀಡದೆ ಇದ್ದರೂ ಪೇಬಿಲ್ಗಳನ್ನು ಮುಂಚಿತವಾಗಿ ಭರ್ತಿ ಮಾಡಿರುವುದು ಪತ್ತೆಯಾಯಿತು.
ಇದರಿಂದ ಅವರಿಗೆ ಆರೋಪ ಪತ್ರ ನೀಡಲಾಗಿದ್ದು, ವಿಚಾರಣೆ ನಡೆಸಿ ವರದಿ ಸಲ್ಲಿಸಲಾಯಿತು. ನಂತರ ಎರಡನೇ ಶೋಕಾಸ್ ನೋಟಿಸ್ ನೀಡಲಾಯಿತು ಮತ್ತು ಸೇವೆಯಿಂದ ವಜಾಗೊಳಿಸುವ ಶಿಕ್ಷೆ ವಿಧಿಸಲಾಯಿತು.
ಅರ್ಜಿದಾರರು ಪ್ರಾದೇಶಿಕ ವ್ಯವಸ್ಥಾಪಕರ ಮುಂದೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಷಯವನ್ನು ಮರುಪರಿಶೀಲನೆಗಾಗಿ ಹಿಂತಿರುಗಿಸಲಾಯಿತು. ಮರು ವಿಚಾರಣೆಯಲ್ಲಿಯೂ ಕಂಡಕ್ಟರ್ ಅವರ ವಿರುದ್ಧದ ಆರೋಪ ಭಾಗಶಃ ಸಾಬೀತಾಯಿತು.
ಅರ್ಜಿದಾರರು 1 ಸೆಪ್ಟೆಂಬರ್ 2009ರಂದು ತಡವಾಗಿ ಉತ್ತರ ಸಲ್ಲಿಸಿದರೂ, ಅದೇ ದಿನ ಸೇವೆಯಿಂದ ವಜಾಗೊಳಿಸುವ ಅಂತಿಮ ಆದೇಶ ಹೊರಡಿಸಲಾಯಿತು. ನಂತರ ಸಲ್ಲಿಸಿದ ಮೇಲ್ಮನವಿಯೂ ತಿರಸ್ಕೃತವಾಯಿತು. ಇದರಿಂದ ಅವರು ಹೈಕೋರ್ಟ್ ಮೊರೆ ಹೋದರು.
ನ್ಯಾಯಾಲಯದ ಅಭಿಪ್ರಾಯ
ಪೀಠವು ಮೊದಲಿಗೆ ಆಡಳಿತ ವ್ಯವಸ್ಥಾಪಕರು ವ್ಯವಸ್ಥಾಪಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿರುದ್ಧ ಕೆ ಮೂರ್ತಿ ಈ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ, ಟಿಕೆಟ್ ಇಲ್ಲದೆ ಪ್ರಯಾಣಿಕರನ್ನು ಸಾಗಿಸುವುದು ಗಂಭೀರ ದುರ್ವರ್ತನೆ ಆಗಿದ್ದು, ಸೇವಾ ವಜಾ ಸೇರಿದಂತೆ ಕಠಿಣ ಶಿಕ್ಷೆಗೆ ಕಾರಣವಾಗಬಹುದು ಎಂದು ನೆನಪಿಸಿತು.
ಸಾಮಾನ್ಯವಾಗಿ ಮೊದಲು ಟಿಕೆಟ್ ನೀಡಲಾಗುತ್ತದೆ ಮತ್ತು ನಂತರ ಪೇಬಿಲ್ಗಳನ್ನು ತುಂಬಲಾಗುತ್ತದೆ; ಅದಕ್ಕೆ ವಿರುದ್ಧವಾಗಿ ನಡೆಯುವುದು ಸಹಜ ಕ್ರಮವಲ್ಲ ಎಂಬುದನ್ನು ಅರ್ಜಿದಾರರು ಖಂಡಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಗಮನಿಸಿತು.
ವಿಚಾರಣೆಯ ಸಂದರ್ಭದಲ್ಲಿ ಸೂಕ್ತ ವಿಧಾನ ಪಾಲಿಸಲಾಗಿದ್ದು, ಅರ್ಜಿದಾರರಿಗೆ ಉತ್ತರ ಸಲ್ಲಿಸಲು ಸಾಕಷ್ಟು ಅವಕಾಶ ನೀಡಲಾಗಿತ್ತು. ಆದಾಗ್ಯೂ, ಟಿಕೆಟ್ ನೀಡದೆ ಮುಂಚಿತವಾಗಿ ಪೇಬಿಲ್ ತುಂಬಲು ಕಾರಣವೇನು ಎಂಬುದಕ್ಕೆ ಅವರು ಯಾವುದೇ ಸಮಂಜಸವಾದ ವಿವರಣೆ ನೀಡಲಿಲ್ಲ.
ಹೀಗಾಗಿ, ಪ್ರಶ್ನಿತ ಆದೇಶದಲ್ಲಿ ಹಸ್ತಕ್ಷೇಪಿಸಲು ಯಾವುದೇ ಆಧಾರ ಇಲ್ಲವೆಂದು ಹೇಳಿ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣದ ಶೀರ್ಷಿಕೆ: ಜಗದಂಬ ಪ್ರಸಾದ್ ಪಾಂಡೆ ವಿರುದ್ಧ ಉತ್ತರ ಪ್ರದೇಶ ರಾಜ್ಯ
ಅಲಹಾಬಾದ್ ಹೈಕೋರ್ಟ್