ಪಿಗ್ಮಿ ಏಜೆಂಟರ ಸೇವಾ ಸ್ವರೂಪ ಬ್ಯಾಂಕ್ ಉದ್ಯೋಗಿಗೆ ಸಮ; ಅವರ ವೇತನಕ್ಕೆ ಜಿಎಸ್ಟಿ ಅನ್ವಯವಾಗದು: ಕರ್ನಾಟಕ ಹೈಕೋರ್ಟ್
ಪಿಗ್ಮಿ ಏಜೆಂಟರ ಸೇವಾ ಸ್ವರೂಪ ಬ್ಯಾಂಕ್ ಉದ್ಯೋಗಿಗೆ ಸಮ; ಅವರ ವೇತನಕ್ಕೆ ಜಿಎಸ್ಟಿ ಅನ್ವಯವಾಗದು: ಕರ್ನಾಟಕ ಹೈಕೋರ್ಟ್
ಪಿಗ್ಮಿ ಏಜೆಂಟ್ಗಳು ಬ್ಯಾಂಕ್ನ ನಿಯಂತ್ರಣ, ಶಿಸ್ತು ಮತ್ತು ಆಡಳಿತ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ನೀಡುವ ವೇತನವನ್ನು ಕಮಿಷನ್ ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪಿಗ್ಮಿ ಏಜೆಂಟ್ಗಳು (ಬ್ಯಾಂಕ್ನ ದೈನಂದಿನ ಠೇವಣಿ ಸಂಗ್ರಹಕಾರರು) ಬ್ಯಾಂಕಿನ ನೌಕರರೇ ಆಗಿದ್ದಾರೆ. ಅವರಿಗೆ ನೀಡುವ ಸಂಬಳಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಲಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಅಯುಕ್ತರು ನೀಡಿದ್ದ ಶೋಕಾಸ್ ಪ್ರಶ್ನಿಸಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದ್ದು, ವಾಣಿಜ್ಯ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ ರದ್ದುಪಡಿಸಿದೆ.
ಪಿಗ್ಮಿ ಏಜೆಂಟ್ಗಳ ಕಾರ್ಯವೈಖರಿ ಮೇಲೆ ಬ್ಯಾಂಕ್ಗಳು ಸಂಪೂರ್ಣ ನಿಯಂತ್ರಣ ಹೊಂದಿರುತ್ತವೆ. ಏಜೆಂಟ್ಗಳು ತಮ್ಮ ಭದ್ರತಾ ಠೇವಣಿಗಳನ್ನು ಬ್ಯಾಂಕ್ನಲ್ಲಿಡಬೇಕಾಗುತ್ತದೆ. ಜೊತೆಗೆ, ಕನಿಷ್ಠ ಸಂಬಳ ನೀಡುವ ಭರವಸೆಯಿರಲಿದೆ. ಗ್ರಾಚ್ಯುಟಿಯಂತಹ ಹಲವು ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ. ಇವೆಲ್ಲವೂ ನೌಕರರಿಗೆ ಇರುವ ಲಕ್ಷಣಗಳೇ ಆಗಿವೆ. ವಿನಃ ಗುತ್ತಿಗೆದಾರರಾಗಿರುವ ಸೂಚನೆಗಳಲ್ಲ ಎಂದು ನ್ಯಾಯಪೀಠ ಹೇಳಿದೆ.
ಪಿಗ್ಮಿ ಏಜೆಂಟರು ನೀಡುವ ಸೇವೆ 'ಉದ್ಯೋಗ ಸಂಬಂಧಿ' ಆಗಿವೆ. ಹೀಗಾಗಿ ಜಿಎಸ್ಟಿ ಕಾಯ್ದೆಯ ಶೆಡ್ಯೂಲ್ 3 ಅಡಿಯಲ್ಲಿ 'ತೆರಿಗೆ ವಿನಾಯಿತಿ'ಗೆ ಅರ್ಹತೆ ಪಡೆಯುತ್ತದೆ. ಆದ್ದರಿಂದ ಅವರ ಸೇವೆಗೆ ಜಿಎಸ್ಟಿ ವಿಧಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪಿಗ್ಮಿ ಏಜೆಂಟರು ಬ್ಯಾಂಕ್ನ ನಿಯಂತ್ರಣ, ಶಿಸ್ತು ಮತ್ತು ಆಡಳಿತ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ನೀಡುವ ವೇತನವನ್ನು ಕಮಿಷನ್ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ವಾಸ್ತವದಲ್ಲಿ ಅದು ವೇತನದಂತೆಯೇ ಇರಲಿದೆ. ಪಿಗ್ರಿ ಏಜೆಂಟಗಳ ಕರ್ತವ್ಯಗಳ ಸ್ವರೂಪವು ಸ್ಪಷ್ಟವಾಗಿ ಉದ್ಯೋಗಿ ಉದ್ಯೋಗದಾತರ ನಡುವಿನ ಸಂಬಂಧ ಇರಲಿದೆ ಎಂದು ತಿಳಿಸಿದೆ.
ಪಿಗ್ಮಿ ಏಜೆಂಟರು ಆರ್ಬಿಐ ಮಾನ್ಯತೆ ಪಡೆದಿರುವಂತ ಮಧ್ಯವರ್ತಿಗಳಲ್ಲ. ಅವರ ಸೇವೆ ಬ್ಯಾಂಕಿನ ಪಿಗ್ಮಿ ಠೇವಣಿ ಯೋಜನೆಯಡಿ ಠೇವಣಿಗಳ ಸಂಗ್ರಹಕ್ಕೆ ಸೀಮಿತವಾಗಿರಲಿದೆ. ಆದರೆ, ಅವರ ಸೇವೆಯನ್ನು ಗ್ರಾಹಕರಿಗೆ ಸೇವೆಗಳನ್ನು ತಲುಪಿಸುವ ಮಧ್ಯವರ್ತಿಗಳ ವರ್ಗಕ್ಕೆ ಸೇರಿಸುವ ಪ್ರಯತ್ನ ತಪ್ಪಾಗಲಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
ಪಿಗ್ಮಿ ಏಜೆಂಟ್ ಗಳಿಗೆ ನೀಡುವ ಕಮಿಷನ್ ಮೇಲೆ ರಿವರ್ಸ್ ಚಾರ್ಜ್ ವ್ಯವಸ್ಥೆಯಡಿ ಜಿಎಸ್ಟಿ ಪಾವತಿಸುವ ಸಂಬಂಧ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು ನೀಡಿದ್ದ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ ಬ್ಯಾಂಕ್ ಪರ ವಕೀಲರು, ಪಿಗ್ಮಿ ಏಜೆಂಟ್ಗಳು ಆರ್ಬಿಐ ಮಾರ್ಗಸೂಚಿಗಳಡಿ ನೇಮಕಗೊಂಡ ಮಧ್ಯವರ್ತಿಗಳಲ್ಲ. ಅದರ ಬದಲಿಗೆ ಬ್ಯಾಂಕ್ ನೌಕರರಾಗಿದ್ದಾರೆ. ಆದ್ದರಿಂದ ಅವರ ಸೇವೆಗೆ ಜಿಎಸ್ಟಿ ಅನ್ವಯಿಸುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಪಿಗ್ಮಿ ಏಜೆಂಟ್ಗಳಿಗೆ ಬ್ಯಾಂಕುಗಳಿಂದ ಕಮಿಷನ್ ಆಧಾರದಲ್ಲಿ ಹಣ ಪಾವತಿಸುತ್ತದೆ. ಅದನ್ನು ವೇತನ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಜಿಎಸ್ಟಿ ಕಾಯ್ದೆಯ ಸೆಕ್ಷನ್ 9(3) ಅನ್ವಯ ಜಿಎಸ್ಟಿ ವಿಧಿಸಬಹುದಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.