-->
LAW POINT 41- ವಕೀಲಿಕೆ ಉದಾತ್ತ ವೃತ್ತಿ: ನ್ಯಾಯದಾನ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ನಿರ್ಣಾಯಕ!

LAW POINT 41- ವಕೀಲಿಕೆ ಉದಾತ್ತ ವೃತ್ತಿ: ನ್ಯಾಯದಾನ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ನಿರ್ಣಾಯಕ!

ವಕೀಲಿಕೆ ಉದಾತ್ತ ವೃತ್ತಿ: ನ್ಯಾಯದಾನ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ನಿರ್ಣಾಯಕ!





ಸಮಾಜದಲ್ಲಿ ವಕೀಲರಿಗೆ ಅತೀ ಮಹತ್ವದ ಸ್ಥಾನಮಾನವಿದೆ. ವಕೀಲ ವೃತ್ತಿ ಅಂದರೆ ಅದೊಂದು ಉದಾತ್ತ/ಪವಿತ್ರ ವೃತ್ತಿ. ವಕೀಲರು ಕಾನೂನು ಪಾಲಕರು ಮತ್ತು ಸಮಾಜವನ್ನು ಮುನ್ನಡೆಸುವವರು ಎಂದೇ ಪ್ರತಿಪಾದಿಸಲಾಗುತ್ತಿದೆ.


ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಕೀಲರು ವಹಿಸಿದ ಪಾತ್ರ ಅತ್ಯಂತ ನಿರ್ಣಾಯಕವಾದದ್ದು. ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಜವಾಹರ್‌ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿಪಟೇಲ್, ಬಾಬು ರಾಜೇಂದ್ರ ಪ್ರಸಾದ್, ಮೋತಿಲಾಲ್ ನೆಹರೂ, ಬಾಲಗಂಗಾಧರ್ ತಿಲಕ್, ಸಿ. ರಾಜಗೋಪಾಲ್ ಸೇರಿದಂತೆ ವಕೀಲರಾದ ಅಸಂಖ್ಯಾತ  ಮಹಾನ್ ನಾಯಕರು ಸ್ವತಂತ್ರ ಭಾರತದ ದಾರ್ಶನಿಕರಾದರು.


"ವಕೀಲರು ಸಮಾಜವನ್ನು ತಿದ್ದುವ ವೈದ್ಯರಿದ್ದಂತೆ. ಅವರಿಗೆ ದೇಶವನ್ನೇ ಬದಲಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ಇದೆ" ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್‌ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದರು. ರೋಗಪೀಡಿತ ಸಮಾಜವನ್ನು ತಿದ್ದುವ ಶಕ್ತಿ ವಕೀಲರಿಗೆ ಇದೆ. ಅವರು ಮನಸ್ಸು ಮಾಡಿದರೆ ಸಮಾಜಮತ್ತು ದೇಶವನ್ನೇ ಬದಲಾಯಿಸಬಹುದು ಎಂದು ಅವರು ವಕೀಲರ ಬಗ್ಗೆ ಅಭಿಮಾನದಿಂದ ಹೇಳಿಕೊಂಡಿದ್ದರು.


ಭಾರತದಲ್ಲಿ ಕೇವಲ 'ವಕೀಲರು' ಮಾತ್ರ ಕಾನೂನು ವೃತ್ತಿ ನಡೆಸಲು ಅರ್ಹರಾಗಿದ್ದಾರೆ. ವಕೀಲರು ಎಂದರೆ ಬಾರ್ ಕೌನ್ಸಿಲ್‌/ವಕೀಲರ ಪರಿಷತ್ತಿನಲ್ಲಿ ಹೆಸರನ್ನು 


ನೋಂದಾಯಿಸಿಕೊಂಡಿರುವ ಮತ್ತು ಕಾನೂನುಬದ್ಧವಾಗಿ ನೋಂದಾಯಿಸಿದವರು.

ವಕೀಲರ ಕಾಯ್ದೆ 1961 ಕಾನೂನು ವೃತ್ತಿಪರರ ಕುರಿತಾದ ಕಾಯ್ದೆಯಾಗಿದೆ. ಕಾನೂನು ವೃತ್ತಿ ನಡೆಸುವ ವಕೀಲರಿಗೆ ನಿಯಮ ನಿಬಂಧನಗಳನ್ನು ಇಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕಲಂ 29ರ ಪ್ರಕಾರ, ಅಧಿಕೃತ ನೋಂದಾಯಿಸಿದ ವ್ಯಕ್ತಿಗಳು ಮಾತ್ರ ಕಾನೂನು ವೃತ್ತಿಗೆ ಅರ್ಹರಾಗಿದ್ದಾರೆ ಎಂದು ಹೇಳುತ್ತದೆ.


ಕಾಯ್ದೆಯ ಸೆಕ್ಷನ್ 33 ಪ್ರಕಾರ, ಯಾವುದೇ ವ್ಯಕ್ತಿಯು ಅಧಿಕೃತವಾಗಿ ವಕೀಲರಾಗಿ ನೋಂದಾಯಿಸಿಕೊಳ್ಳದ ಹೊರತು ಯಾವುದೇ ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸುವಂತಿಲ್ಲ ಮತ್ತು ತಮ್ಮನ್ನು ಪೂರ್ಣಪ್ರಮಾಣದಲ್ಲಿ ವಕೀಲರು ಎಂದು ಬಿಂಬಿಸುವಂತಿಲ್ಲ.


ಯಾವುದೇ ವ್ಯಕ್ತಿಯು ಅಧಿಕೃತ ಅನುಮತಿ ಇಲ್ಲದೆ (ನೋಂದಣಿ ಅಥವಾ ವೃತ್ತಿ ಪ್ರಮಾಣಪತ್ರ - ಸಿ.ಓ.ಪಿ ಇಲ್ಲದೆ) ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸಿದರೆ, ಅವರಿಗೆ ಸೆಕ್ಷನ್ 45ರ ಪ್ರಕಾರ ದಂಡ ಅಥವಾ ಜೈಲು ಶಿಕ್ಷೆ (ಸರಳ ಸೆರೆಮನೆ ವಾಸ) ವಿಧಿಸಬಹುದಾಗಿದೆ.

ಕಾನೂನು ಪದವಿ ಪಡೆದ ಮಾತ್ರ ಒಬ್ಬ ವ್ಯಕ್ತಿ ವಕೀಲರು ಎನ್ನಿಸಿಕೊಳ್ಳುವುದಿಲ್ಲ. ಅವರು ನಿಯಮ ಪ್ರಕಾರವಾಗಿ ವಕೀಲರ ಪರಿಷತ್ತಿನ ಸದಸ್ಯರಾಗಿ ವೃತ್ತಿ ಪ್ರಮಾಣಪತ್ರ (Certificate of Practice) ಮತ್ತು ನೋಂದಣಿ (Enrollment) ಮಾಡಿಸಿಕೊಂಡರೆ ಮಾತ್ರ ಕಾನೂನು ವೃತ್ತಿ  ನಡೆಸಬಹುದಾಗಿದೆ.


ಕೇವಲ ನೋಂದಣಿ ಮಾಡಿದ ಮಾತ್ರಕ್ಕೆ ವಕೀಲ ವೃತ್ತಿ ನಡೆಸಲಾಗದು. ಅವರು ಬಾರ್ ಕೌನ್ಸಿಲ್ ನಡೆಸುವ AIBE ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಆ ಪ್ರಕ್ರಿಯೆಗೂ ಮುನ್ನ ಅವರು ವಕಾಲತ್ತಿಗೆ ಸಹಿ ಹಾಕಲಾಗದು. ಅಥವಾ, ನ್ಯಾಯಾಲಯದ ಮುಂದೆ ಹಾಜರಾಗುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದಲ್ಲಿ, ವಕೀಲರ ಕಾಯ್ದೆ 1961ರ ಕಲಂ 33 ಮತ್ತು 45ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ.


ಅದೇ ರೀತಿ, ವಕೀಲರು ಯಾವುದೇ ಸ್ಥಳೀಯ ವಕೀಲರ ಸಂಘ (ಬಾ‌ರ್ ಅಸೋಸಿಯೇಷನ್) ದಲ್ಲಿ ಸದಸ್ಯತ್ವ ಹೊಂದುವುದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ವಕೀಲರ ಸಂಘದ ಸದಸ್ಯರಲ್ಲ ಎಂದ ಮಾತ್ರಕ್ಕೆ ಕಾನೂನು ವೃತ್ತಿ ಮಾಡುವುದನ್ನು ನಿರ್ಬಂಧಿಸಲು ಅಥವಾ ಅವರ ಅರ್ಹತೆಯನ್ನು ಕಸಿದುಕೊಳ್ಳಲು ವಕೀಲರ ಸಂಘಕ್ಕೆ ಸಾಧ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ "ವಿಜಯ್ ಗೋಪಾಲ್ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ" ಪ್ರಕರಣದಲ್ಲಿ ತೀರ್ಪು ನೀಡಿದೆ.


'ವಕೀಲ'ರಲ್ಲದವರು ಕರಿ ಕೋಟ್ ಧರಿಸುವುದು ಅಪರಾಧವೇ..?

ಇಲ್ಲ. ಕೇವಲ ಕಪ್ಪು ಕೋಟ್ ಧರಿಸುವುದು ಅಪರಾಧವಲ್ಲ. ಆದರೆ, ಒಬ್ಬ ವ್ಯಕ್ತಿಯು ಕಪ್ಪು ಕೋಟ್ ಧರಿಸಿ, ತನ್ನನ್ನು ತಾನು ವಕೀಲ ಎಂದು ಪರಿಚಯಿಸಿಕೊಂಡರೆ/ಬಿಂಬಿಸಿಕೊಂಡರೆ ಅದು ಅಪರಾಧ. ಅದೇ ರೀತಿ, ತಾನು ವಕೀಲನೆಂದು ಹೇಳಿಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಿದರೆ, ಅದನ್ನು "ಅಕ್ರಮ ವಕೀಲಿ ವೃತ್ತಿ" (Illegal practice of law)" ಎಂದು ಪರಿಗಣಿಸಲಾಗುತ್ತದೆ. ಅಂತಹ ವ್ಯಕ್ತಿಯ ವಿರುದ್ದ ಸೆಕ್ಷನ್ 45ರ ಅಡಿಯಲ್ಲಿ ಕ್ರಮ ಜರುಗಿಸಬಹುದು.


ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವುದು ಹೇಗೆ?

1. ಸಂಬಂಧಪಟ್ಟ ನ್ಯಾಯಾಲಯದಲ್ಲಿ ಲಿಖಿತ ದೂರನ್ನು ಸಲ್ಲಿಸಬಹುದು.

2. ಭಾರತೀಯ ಬಾರ್ ಕೌನ್ಸಿಲ್ (BCI) ಅಥವಾ ರಾಜ್ಯ ವಕೀಲರ ಪರಿಷತ್ತಿಗೆ ಲಿಖಿತವಾಗಿ ದೂರು ನೀಡಬಹುದು.

3. ನ್ಯಾಯಾಲಯವು ಸ್ವಯಂಪ್ರೇರಿತವಾಗಿ (Suo Moto) ಕ್ರಮ ತೆಗೆದುಕೊಳ್ಳಬಹುದು.


"ಕಾನೂನು ವೃತ್ತಿ ಎಂಬುದು ಸೇವೆ"

ವಕೀಲ ವೃತ್ತಿ ಎನ್ನುವುದು ವಾಣಿಜ್ಯ ಚಟುವಟಿಕೆಯಲ್ಲ. ಅದೊಂದು ಸೇವೆ. ನೆಲದ ಕಾನೂನನ್ನು ಎತ್ತಿಹಿಡಿದು, ವೈಯಕ್ತಿಕ ಹಕ್ಕುಗಳ ಪರವಾಗಿ ವಾದ ಮಂಡಿಸುವುದು ವಕೀಲರ ಆದ್ಯ ಕರ್ತವ್ಯ. ವಕೀಲರನ್ನು 'ಕೋರ್ಟ್ ಆಫೀಸರ್‌' ಎಂದು ಕರೆಯುತ್ತಾರೆ. ಕೋರ್ಟ್‌ನಲ್ಲಿ ಕಕ್ಷಿದಾರರ ಪರವಾಗಿ ವಕಾಲತ್ತು ನಡೆಸುವ ಜೊತೆಗೆ ನ್ಯಾಯದಾನದ ಪ್ರಕ್ರಿಯೆಯಲ್ಲಿ ನ್ಯಾಯಾಲಯಕ್ಕೆ ಸಹಕರಿಸುವುದು. ನ್ಯಾಯಾಲಯದ ಸ್ನೇಹಿತ (ಅಮಿಕಸ್ ಕ್ಯೂರಿ)ಯಾಗಿಯೂ ವಕೀಲರು ಕರ್ತವ್ಯ ನಿರ್ವಹಿಸುತ್ತಾರೆ.


ವಕೀಲರು ಕೇವಲ ಕಕ್ಷಿದಾರರ ಏಜೆಂಟ್ ಅಥವಾ ಕಕ್ಷಿದಾರರ ಮುಖವಾಣಿಯಲ್ಲ. ಅವರು ಕಕ್ಷಿದಾರರಿಗೆ ಸೂಕ್ತ ಕಾನೂನು ಸಲಹೆ ನೀಡುವ ಕರ್ತವ್ಯವನ್ನು ಹೊಂದಿದ್ದಾರೆ ಎಂಬುದನ್ನು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ವಕೀಲರ ಕರ್ತವ್ಯವನ್ನು ನೆನಪಿಸಿದೆ.

ವಕೀಲರನ್ನು ಬ್ಯಾಂಕ್‌, ವಿಮಾ ಕಂಪೆನಿ ಸೇರಿದಂತೆ ಸಾಂಸ್ಥಿಕವಾಗಿ ಪ್ಯಾನಲ್ ವಕೀಲರನ್ನಾಗಿ ನೇಮಿಸುತ್ತದೆ. ಅಂತಹ ಪ್ಯಾನೆಲ್ ವಕೀಲರನ್ನು ವಿನಾ ಕಾರಣ ಕಿತ್ತು ಹಾಕುವಂತಿಲ್ಲ. ಸೂಕ್ತ ಕಾರಣ ನೀಡಿದರೆ ಮಾತ್ರ ಅವರನ್ನು ಪ್ಯಾನೆಲ್‌ನಿಂದ ತೆರವುಗೊಳಿಸಬಹುದು. ಈ ಬಗ್ಗೆ ವಿವಿಧ ಹೈಕೋರ್ಟ್‌ಗಳು ತೀರ್ಪುಗಳನ್ನು ನೀಡಿವೆ. ಈ ಪೈಕಿ, "ಪ್ರತಾಪ್ ಸಿಂಗ್ ವಿರುದ್ಧ ಜೈಪುರ್ ಡೆವೆಲಪ್‌ಮೆಂಟ್ ಅಥಾರಿಟಿ" ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್‌ ನೀಡಿದ ತೀರ್ಪಿನಲ್ಲಿ ಹೀಗೆ ಉಲ್ಲೇಖಿಸಲಾಗಿದೆ:- "ವಕೀಲರು ಘನತೆಯನ್ನು ಹೊಂದಿರುತ್ತಾರೆ, ಅದನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಅವರನ್ನು ಸೇವಕರಂತೆ ನಡೆಸಿಕೊಳ್ಳಲಾಗುವುದಿಲ್ಲ, ಕಾನೂನಿನ ಕೆಲಸಗಳಿಗೆ ಸಂಬಂಧಿಸಿದಂತೆ ವಕೀಲರ ಆಯ್ಕೆ ಅಥವಾ ನಿವೃತ್ತಿ, ಸಮಂಜಸವಾದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಇರಬೇಕು"


ವಕೀಲರ ಜೊತೆಗಿನ ಮಾತುಕತೆಗೆ ಕಾನೂನು ರಕ್ಷಣೆ:

ವಕೀಲರು ಮತ್ತು ಕಕ್ಷಿದಾರರ ನಡುವಿನ ಸಂವಹನದ ಬಗ್ಗೆ ಕಾನೂನು ರಕ್ಷಣೆ ಇರುತ್ತದೆ. ವಕೀಲರು ತಮ್ಮ ಕಕ್ಷಿದಾರರೊಂದಿಗೆ ನಡೆಸುವ ಮಾತುಕತೆ ಮತ್ತು ಚರ್ಚೆಯನ್ನು ಯಾವುದೇ ತನಿಖಾಧಿಕಾರಿಯ ಮುಂದೆ ಬಹಿರಂಗಪಡಿಸುವಂತಿಲ್ಲ. ಅದಕ್ಕೆ ಕಾನೂನಿನ ರಕ್ಷಣೆ ಇದೆ ಎಂದು ಜಾರ್ಖಂಡ್ ಹೈಕೋರ್ಟ್‌ "ಅಗ್ನಿವ ಸರ್ಕಾರ್ ವಿರುದ್ಧ ಭಾರತ ಸರ್ಕಾರ ಮತ್ತಿತರರು" ಪ್ರಕರಣದಲ್ಲಿ (25-07-2025) ತೀರ್ಪು ನೀಡಿದೆ. ವಕೀಲರು ತಮ್ಮ ಕಕ್ಷಿದಾರ ವಿಚಾರದಲ್ಲಿ ಗೋಪ್ಯತೆಯನ್ನು ಕಾಪಾಡಬಹುದಾಗಿದೆ. ದೇಶದ ರಕ್ಷಣಾ ವಿಚಾರ ಹಾಗೂ ಕ್ರಿಮಿನಲ್ ಚಟುವಟಿಕೆಗೆ ಪ್ರಚೋದನೆ, ಅಕ್ರಮ ಮೊದಲಾದ ವಿಚಾರಗಳು ಮಾತ್ರ ಈ ವ್ಯಾಪ್ತಿಗೆ ಬರುವುದಿಲ್ಲ.


ಅದೇ ರೀತಿ, ಕಕ್ಷಿದಾರರಿಗೆ ದೂರವಾಣಿ ಮೂಲಕ ಕಾನೂನು ಸಲಹೆ ನೀಡದಂತೆ ವಕೀಲರಿಗೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿರುವುದನ್ನು ಇಲ್ಲಿ ನೆನಪಿಸಬಹುದು. ಕಾನೂನು ಸಲಹೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಎಲ್ಲೋ ದಾರಿ ಮಧ್ಯೆಯೋ, ಫೋನ್ ಕಾಲ್ ಮೂಲಕವೋ ನೀಡುವುದಲ್ಲ. ಕಕ್ಷಿದಾರರು ವಕೀಲರ ಉಪಸ್ಥಿತಿಯ ಸಮಯದಲ್ಲಿ ಅವರ ಕಚೇರಿಗೆ ಭೇಟಿ ನೀಡಿ ಅವರಿಂದ ಕಾನೂನು ಸಲಹೆ ಪಡೆದುಕೊಳ್ಳುವುದು ಸೂಕ್ತವಾಗಿದೆ.


ವಕೀಲರು ಜಾಹೀರಾತು ನೀಡುವಂತಿಲ್ಲ!

ವಕೀಲರು ಜಾಹೀರಾತು ನೀಡುವುದು ಅಥವಾ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ರೀಲ್ಸ್, ಮೀಮ್ಸ್‌ ಮಾಡುವುದು, ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡಿ ಕಕ್ಷಿದಾರರನ್ನು ಆಕರ್ಷಿಸಲು ಪ್ರಯತ್ನಿಸುವುದು 'ವಕೀಲ ವೃತ್ತಿ'ಯ ಘನತೆಗೆ ಕುಂದು ಎಂಬುದಾಗಿ ವಕೀಲರ ಪರಿಷತ್ತು ಪರಿಗಣಿಸುತ್ತದೆ. ಅಂತಹ ವಕೀಲರ ವಿರುದ್ಧ ಸನದು ಅಮಾನತು ಮುಂತಾದ ಶಿಕ್ಷೆಯನ್ನೂ ವಿಧಿಸಬಹುದಾಗಿದೆ.


ಜಾಹೀರಾತು ನಿಷೇಧದ ಹಿಂದಿನ ತಾರ್ಕಿಕತೆ ಸರಳ ಆದರೆ ಪ್ರಭಾವಶಾಲಿಯಾಗಿದೆ: ಕಾನೂನನ್ನು ಒಂದು ಉದಾತ್ತ ವೃತ್ತಿ ಎಂದು ಪರಿಗಣಿಸಲಾಗುತ್ತದೆ, ನಿಯಮಿತ ವ್ಯವಹಾರವಲ್ಲ. ದಶಕಗಳಲ್ಲಿ ಸುಪ್ರೀಂ ಕೋರ್ಟ್ ಈ ದೃಷ್ಟಿಕೋನವನ್ನು ಹಲವು ಬಾರಿ ಬಲಪಡಿಸಿದೆ.


ಮಹಾರಾಷ್ಟ್ರ ಬಾರ್ ಕೌನ್ಸಿಲ್ ವಿರುದ್ಧ ಎಂ.ವಿ. ದಾಭೋಲ್ಕರ್ (1975) ರ ಐತಿಹಾಸಿಕ ಪ್ರಕರಣದಲ್ಲಿ, ಗೌರವಾನ್ವಿತ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ಸ್ಮರಣೀಯವಾಗಿ ಹೀಗೆ ಹೇಳಿದರು, "ಕಾನೂನು ಯಾವುದೇ ವ್ಯಾಪಾರವಲ್ಲ, ಯಾವುದೇ ಸರಕುಗಳನ್ನು ಸಂಕ್ಷಿಪ್ತಗೊಳಿಸುವುದಿಲ್ಲ, ಆದ್ದರಿಂದ ವಾಣಿಜ್ಯ ಸ್ಪರ್ಧೆ ಕಾನೂನು ವೃತ್ತಿಯನ್ನು ಅಶ್ಲೀಲಗೊಳಿಸಬಾರದು."


ಇಪ್ಪತ್ತು ವರ್ಷಗಳ ನಂತರ, ಇಂಡಿಯನ್ ಕೌನ್ಸಿಲ್ ಆಫ್ ಲೀಗಲ್ ಏಡ್ & ಅಡ್ವೈಸ್ vs ಬಾರ್ ಕೌನ್ಸಿಲ್ ಆಫ್ ಇಂಡಿಯಾ (1995) ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಮತ್ತೊಮ್ಮೆ, "ಕಾನೂನು ಒಂದು "ಉದಾತ್ತ ವೃತ್ತಿ"ಯಾಗಿದ್ದು, ಅದು ಕೇವಲ ಹಣ ಗಳಿಸುವ ಮಾರ್ಗವಲ್ಲ, ಸಮಾಜಕ್ಕೆ ಬಾಧ್ಯತೆಗಳನ್ನು ಹೊಂದಿದೆ" ಎಂದು ಒತ್ತಿ ಹೇಳಿತ್ತು.


ಜಾಹೀರಾತನ್ನು ಅನುಮತಿಸುವುದರಿಂದ ಕಾನೂನು ಅಭ್ಯಾಸವು ಸಂಪೂರ್ಣವಾಗಿ ವಾಣಿಜ್ಯ ಚಟುವಟಿಕೆಯಾಗಿ ಬದಲಾಗುತ್ತದೆ, ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತದೆ ಮತ್ತು ವೃತ್ತಿಯ ಘನತೆಗೆ ಹಾನಿ ಮಾಡುತ್ತದೆ ಎಂಬುದು ಮುಖ್ಯ ಕಾಳಜಿ.


ಜುಲೈ 2024 ರಲ್ಲಿ, ಮದ್ರಾಸ್ ಹೈಕೋರ್ಟ್ ಕ್ವಿಕರ್ ಮತ್ತು ಸುಲೇಖಾದಂತಹ ಆನ್‌ಲೈನ್ ಕಾನೂನು ಡೈರೆಕ್ಟರಿಗಳು ಸಹ ಈ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ತೀರ್ಪು ನೀಡಿತು. "ವಕೀಲ ವೃತ್ತಿಯಲ್ಲಿ ಬ್ರ್ಯಾಂಡಿಂಗ್ ಸಂಸ್ಕೃತಿ ಸಮಾಜಕ್ಕೆ ಹಾನಿಕಾರಕ" ಎಂದು ನ್ಯಾಯಾಲಯ ಹೇಳಿತು. ಮತ್ತು ಅಂತಹ ವೇದಿಕೆಗಳಲ್ಲಿ ಜಾಹೀರಾತು ನೀಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ಬಾರ್ ಕೌನ್ಸಿಲ್‌ಗೆ ನಿರ್ದೇಶಿಸಿತು.


ಈ ನಿರ್ದೇಶನದ ನಂತರ, ರಾಜ್ಯ ಬಾರ್ ಕೌನ್ಸಿಲ್‌ಗಳು ತಮ್ಮದೇ ಆದ ಕಠಿಣ ಕ್ರಮಗಳನ್ನು ಪ್ರಾರಂಭಿಸಿದವು. ದೆಹಲಿ ಮತ್ತು ಪಂಜಾಬ್-ಹರಿಯಾಣಗಳು 2025ರ ಜುಲೈ ಮತ್ತು ಆಗಸ್ಟ್‌ನಲ್ಲಿ ಎಚ್ಚರಿಕೆಗಳನ್ನು ನೀಡಿದ್ದು, ಕೆಲಸ ಕೇಳಲು ಸಾಮಾಜಿಕ ಮಾಧ್ಯಮವನ್ನು ಬಳಸುವುದನ್ನು ವೃತ್ತಿಪರ ದುಷ್ಕೃತ್ಯವೆಂದು ಪರಿಗಣಿಸಲಾಗುತ್ತದೆ, ಇದು ಪರವಾನಗಿಯನ್ನು ಅಮಾನತುಗೊಳಿಸಲು ಅಥವಾ ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಹೇಳಿದೆ.

ಕರ್ನಾಟಕವು ನಿಯಮಗಳ ಅನುಸರಣೆಗೆ ನಿಜವಾದ ಗಡುವನ್ನು ನಿಗದಿಪಡಿಸುವ ಮೂಲಕ ಇನ್ನೂ ಮುಂದೆ ಹೋಗಿ, ಅಂತಹ ನಿರ್ದಿಷ್ಟ ಕ್ರಮ ಕೈಗೊಂಡ ಮೊದಲ ರಾಜ್ಯವಾಯಿತು.

ವೃತ್ತಿಪರರು ತಮ್ಮನ್ನು ತಾವು ಹೇಗೆ ಮಾರುಕಟ್ಟೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಸಾಮಾಜಿಕ ಮಾಧ್ಯಮವು ಮರುರೂಪಿಸುತ್ತಲೇ ಇರುವುದರಿಂದ, ಭಾರತದ ಕಾನೂನು ಸಂಸ್ಥೆಯು ದೃಢವಾದ ರೇಖೆಯನ್ನು ಎಳೆಯುತ್ತಿದೆ. ವಕೀಲರಿಗೆ, ಸಂದೇಶ ಸ್ಪಷ್ಟವಾಗಿದೆ: ನಿಮ್ಮ ಅಭ್ಯಾಸವು ಆಧುನಿಕವಾಗಿರಬಹುದು, ಆದರೆ ನಿಯಮಗಳು ಸಾಂಪ್ರದಾಯಿಕವಾಗಿಯೇ ಉಳಿದಿವೆ. ಕಾನೂನು ಒಂದು ವೃತ್ತಿಯಾಗಿ ಉಳಿದಿದೆ, ಜಾಹೀರಾತು ಮಾಡಬೇಕಾದ ಉತ್ಪನ್ನವಲ್ಲ. ಬದಲಾಗಿ ಅದೊಂದು ಉದಾತ್ತ ವೃತ್ತಿ.


LAW POINT 41- ARTICLE BY SUKESH KUMAR SHETTY, ADVOCATE, MANGALURU, 575001, MOB:9483804040

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu