ಜೈಲು ಹಕ್ಕಿಗೆ ಆಸ್ತಿ ವರ್ಗಾವಣೆ ಹಕ್ಕು ಇದೆ; ನೋಂದಣಾಧಿಕಾರಿಯೇ ಜೈಲಿಗೆ ಹೋಗಿ ಪ್ರಕ್ರಿಯೆ ಪೂರ್ಣಗೊಳಿಸಲಿ- ಕರ್ನಾಟಕ ಹೈಕೋರ್ಟ್
ಜೈಲು ಹಕ್ಕಿಗೆ ಆಸ್ತಿ ವರ್ಗಾವಣೆ ಹಕ್ಕು ಇದೆ; ನೋಂದಣಾಧಿಕಾರಿಯೇ ಜೈಲಿಗೆ ಹೋಗಿ ಪ್ರಕ್ರಿಯೆ ಪೂರ್ಣಗೊಳಿಸಲಿ- ಕರ್ನಾಟಕ ಹೈಕೋರ್ಟ್
ಜೈಲಿನಲ್ಲಿದ್ದ ಮಾತ್ರಕ್ಕೆ ವ್ಯಕ್ತಿಯ ಆಸ್ತಿ ಹಕ್ಕು ಮೊಟಕುಗೊಳ್ಳುವುದಿಲ್ಲ. ಅವರು ಜೈಲಿನಲ್ಲಿದ್ದರೂ ಆಸ್ತಿ ಮಾರಾಟ ಮತ್ತು ನೋಂದಣಿ ಮಾಡಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.
ಅಪರಾಧ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಲ್ಲಿರುವ ವ್ಯಕ್ತಿಯ ಆಸ್ತಿಹಕ್ಕುಗಳು ಮೊಟಕುಗೊಳ್ಳುವುದಿಲ್ಲ. ಜೈಲಿನಲ್ಲಿದ್ದರೂ ತನ್ನ ಆಸ್ತಿ ಮಾರಾಟ ಮಾಡಲು, ನೋಂದಣಿ ಮಾಡಲು ಕಾನೂನುಬದ್ದವಾಗಿ ಅವಕಾಶವಿದೆ ಎಂದು ತೀರ್ಪು ಸ್ಪಷ್ಟಪಡಿಸಿದೆ.
ಧಾರವಾಡದ ಜೈಲಿನಲ್ಲಿ ವಿಚಾರಣಾ ಕೈದಿಯ ರುವ ಕಮಲಾಪುರ ಗ್ರಾಮದ ಬಸವರಾಜು ಎಂಬಾತ ತನ್ನ 22 ಗುಂಟೆ ಜಮೀನು ಮಾರಾಟಕ್ಕೆ ಮುಂದಾಗಿದ್ದರು. ಆಸ್ತಿ ನೋಂದಣಿಗೆ ಖುದ್ದಾಗಿ ಉಪನೋಂದಣಾಧಿಕಾರಿ ಕಚೇರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಉಪನೋಂದಣಾಧಿಕಾರಿಯೇ ಜೈಲಿಗೆ ಬರಲು ಒಪ್ಪಿದ್ದರೂ ಜೈಲಧಿಕಾರಿಗಳು ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆ ಬಸವರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣಾಧೀನ ಕೈದಿಗೆ ಸಾಮಾನ್ಯರಂತೆ ತನ್ನ ಆಸ್ತಿ ಪರಭಾರೆ ಮಾಡುವ ಹಕ್ಕುಗಳಿರುತ್ತವೆ. ಜೈಲುವಾಸವು ವ್ಯಕ್ತಿಯ ಆಸ್ತಿ ಮಾಲೀಕತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಜೈಲಿನಲ್ಲಿರುವ ವ್ಯಕ್ತಿಯನ್ನು ನೋಂದಣಾಧಿಕಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂಬುದಾಗಿ ಒತ್ತಾಯಿಸುವಂತಿಲ್ಲ. ಬದಲಾಗಿ, ಉಪನೋಂದಣಾಧಿಕಾರಿಯೇ ಜೈಲಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದಕ್ಕೆ ಅಗತ್ಯ ಸೌಲಭ್ಯ ಒದಗಿಸುವುದು ಜೈಲಾಧಿಕಾರಿಗಳ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.