ಶಾಸಕರ ವಿರುದ್ಧ ಪ್ರಾಸಿಕ್ಯೂಷನ್ಗೆ ಸ್ಪೀಕರ್ ಅನುಮತಿ ನಿರಾಕರಿಸಲಾಗದು: ಹೈಕೋರ್ಟ್
ಶಾಸಕರ ವಿರುದ್ಧ ಪ್ರಾಸಿಕ್ಯೂಷನ್ಗೆ ಸ್ಪೀಕರ್ ಅನುಮತಿ ನಿರಾಕರಿಸಲಾಗದು: ಹೈಕೋರ್ಟ್
ಜನಪ್ರತಿನಿಧಿಗಳಾದ ಶಾಸಕರನ್ನು ನೇಮಕ ಮಾಡುವ ಅಧಿಕಾರ ತಮಗಿಲ್ಲ ಎಂಬ ಕಾರಣ ನೀಡಿ ವಿಧಾನಸಭಾ ಅಧ್ಯಕ್ಷರು ಶಾಸಕರ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸುನೀಲ್ ದತ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಂಸದರು, ಶಾಸಕರು ಸಾರ್ವಜನಿಕರ ಸೇವಕರೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹಾಗಾಗಿ, ತನಿಖಾ ಸಂಸ್ಥೆಗಳು ಅಥವಾ ಖಾಸಗಿ ದೂರುದಾರರು ಆರೋಪಪಟ್ಟಿ ಸಲ್ಲಿಸುವ ಮುನ್ನ ಸದನದ ಸಭಾಧ್ಯಕ್ಷರು ಅಥವಾ ಸ್ಪೀಕರ್ ಅವರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಬಿಜೆಪಿ ಸೇರಲು ಜೆಡಿಎಸ್ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡಿದ ಆರೋಪ ಸಂಬಂಧ ಶಾಸಕರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನಿರಾಕರಿಸಿದ್ದ ಸ್ಪೀಕರ್ ಕಚೇರಿಯ ಕ್ರಮ ಪ್ರಶ್ನಿಸಿ ಪ್ರಕರಣದ ಖಾಸಗಿ ದೂರುದಾರ ಹಾಗೂ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ಪೀಕರ್ ಕಚೇರಿಯ ಹಿಂಬರಹವನ್ನು ರದ್ದುಪಡಿಸಿದೆ.