-->
ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ: ಜಸ್ಟೀಸ್ ಕೆ.ಎಸ್.ಹೆಗ್ಡೆ

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ: ಜಸ್ಟೀಸ್ ಕೆ.ಎಸ್.ಹೆಗ್ಡೆ

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ: ಜಸ್ಟೀಸ್ ಕೆ.ಎಸ್.ಹೆಗ್ಡೆ



ಜಸ್ಟೀಸ್ ಕೆ.ಎಸ್.ಹೆಗ್ಡೆ (ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆ)

ಜಡ್ಜ್; ಸುಪ್ರೀಂ ಕೋರ್ಟ್ ಆಫ್ ಇಂಡಿಯಾ







ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆಯವರು ದಿನಾಂಕ 11.6.1909 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಕ೯ಳ ತಾಲೂಕಿನ ಕೌಡೂರಿನ ಬಂಟ ಸಮುದಾಯದ ಪ್ರತಿಷ್ಠಿತ ಮನೆತನದಲ್ಲಿ ಜನಿಸಿದರು.



ಅವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕಾರ್ಕಳದಲ್ಲಿ ಪಡೆದರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗವನ್ನು ಮಾಡಿದ ಇವರು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿಯನ್ನು ಪೂರೈಸಿದರು. ಗವರ್ನಮೆಂಟ್ ಲಾ ಕಾಲೇಜ್ ಮದರಾಸಿನಲ್ಲಿ ಕಾನೂನು ಪದವಿಯನ್ನು ಪಡೆದರು.



1935 ರಲ್ಲಿ ಕಾರ್ಕಳದಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. 1940 ರಲ್ಲಿ ತಮ್ಮ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಿದರು. ಸರಕಾರಿ ವಕೀಲರಾಗಿ ಹಾಗೂ ಸಾರ್ವಜನಿಕ ಅಭಿಯೋಜಕರಾಗಿ 1947 ರಲ್ಲಿ ನೇಮಕಗೊಂಡರು. 1952 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1954 ರಲ್ಲಿ ವಿಶ್ವಸಂಸ್ಥೆಗೆ ತೆರಳಿದ ಭಾರತೀಯ ನಿಯೋಗದ ಸದಸ್ಯರಾಗಿದ್ದರು.



1956ರಲ್ಲಿ ಬೆಂಗಳೂರಿಗೆ ತಮ್ಮ ಕಚೇರಿಯನ್ನು ಸ್ಥಳಾಂತರಿಸಿದರು. 1957 ರಲ್ಲಿ ಮೈಸೂರು ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು.



31.10.1966 ರಲ್ಲಿ ದೆಹಲಿ ಮತ್ತು ಹಿಮಾಚಲ ಪ್ರದೇಶ ಹೈಕೋರ್ಟ್ ನ ಪ್ರಪ್ರಥಮ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು.



ದಿನಾಂಕ 17.7.1967 ರ೦ದು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕ ರಾಜ್ಯದಿಂದ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡ ಪ್ರಪ್ರಥಮ ನ್ಯಾಯಾಧೀಶರೆಂಬ ಖ್ಯಾತಿ ಇವರದು.



ಸುಪ್ರೀಂಕೋರ್ಟ್ ನಲ್ಲಿ 13 ಮಂದಿ ನ್ಯಾಯಾಧೀಶರುಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಇತ್ಯರ್ಥಪಡಿಸಿದ ಐತಿಹಾಸಿಕ ರಿಟ್‍ ಪ್ರಕರಣ "ಕೇಶವಾನಂದ ಭಾರತಿ ಶ್ರೀಪಾದರು, ಎಡನೀರು ಮಠ Vs ಕೇರಳ ಸರಕಾರ" ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ನ್ಯಾಯಪೀಠದ ಸದಸ್ಯರಾಗಿದ್ದರು. ನ್ಯಾಯಮೂರ್ತಿ ಕೆ. ಎಸ್. ಹೆಗ್ಡೆಯವರ ಅಪ್ರತಿಮ ಜ್ಞಾನವು ಅವರು ನೀಡಿದ ತೀರ್ಪುಗಳಲ್ಲಿ ಪ್ರತಿಫಲಿಸಿದೆ.



ಸೇವಾ ಜೇಷ್ಠತೆಯನ್ನು ಕಡೆಗಣಿಸಿ ತನಗಿಂತ ಕಿರಿಯ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರಕಾರದ ನಿಲುವನ್ನು ವಿರೋಧಿಸಿ ದಿನಾಂಕ 30.4.1973 ರಂದು ಸುಪ್ರೀಂಕೋರ್ಟಿನ ನ್ಯಾಯಾಧೀಶರ ಸ್ಥಾನಕ್ಕೆ ರಾಜೀನಾಮೆ ನೀಡಿದರು.



1977 ರಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಇವರು 1977 ರಿಂದ 1980 ರ ವರೆಗೆ ಲೋಕಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಲೋಕಸಭಾ ಸ್ಪೀಕರ್ ಹುದ್ದೆಗೂ ಮೊದಲು ಅವರ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಪ್ರಸ್ತಾಪಿಸಲ್ಪಟ್ಟಿತು.



1979 ರಲ್ಲಿ ನಿಟ್ಟೆ ಎಜುಕೇಷನ್‌ ಟ್ರಸ್ಟ್ ಎಂಬ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದರು. ಇವರು ಸ್ಥಾಪಿಸಿದ ಈ ಸಂಸ್ಥೆಯು ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳ ಸಹಿತ ಹಲವಾರು ವಿದ್ಯಾ ಸ೦ಸ್ಥೆಗಳನ್ನು ಒಳಗೊಂಡ ಒಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.


✍ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ

Photo: Sri Prakash Nayak, Mangaluru


ಇದನ್ನೂ ಓದಿ:

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ: ಜಸ್ಟೀಸ್ ಅಮ್ಮೆಂಬಳ ನಾರಾಯಣ ಪೈ

Ads on article

Advertise in articles 1

advertising articles 2

Advertise under the article