![ಜಡ್ಜ್ ಸ್ಥಾನ ತೊರೆದು ರಾಜಕೀಯಕ್ಕೆ: ಎಲೆಕ್ಷನ್ ಸ್ಪರ್ಧಿಸಲು ಜಡ್ಜ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿವಿಲ್ ನ್ಯಾಯಾಧೀಶ ! ಜಡ್ಜ್ ಸ್ಥಾನ ತೊರೆದು ರಾಜಕೀಯಕ್ಕೆ: ಎಲೆಕ್ಷನ್ ಸ್ಪರ್ಧಿಸಲು ಜಡ್ಜ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿವಿಲ್ ನ್ಯಾಯಾಧೀಶ !](https://i.ytimg.com/vi/UWH1E3QUwyI/hqdefault.jpg)
ಜಡ್ಜ್ ಸ್ಥಾನ ತೊರೆದು ರಾಜಕೀಯಕ್ಕೆ: ಎಲೆಕ್ಷನ್ ಸ್ಪರ್ಧಿಸಲು ಜಡ್ಜ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿವಿಲ್ ನ್ಯಾಯಾಧೀಶ !
ಜಡ್ಜ್ ಸ್ಥಾನ ತೊರೆದು ರಾಜಕೀಯಕ್ಕೆ: ಎಲೆಕ್ಷನ್ ಸ್ಪರ್ಧಿಸಲು ಜಡ್ಜ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿವಿಲ್ ನ್ಯಾಯಾಧೀಶ !
ರಾಜ್ಯ ವಿಧಾನಸಭೆಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಇನ್ನೊಂದು ಅಚ್ಚರಿಯ ಘಟನೆಯೊಂದರಲ್ಲಿ, ರಾಜ್ಯದ ನ್ಯಾಯಾಂಗದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಹುದ್ದೆಯನ್ನು ತ್ಯಜಿಸಿ ರಾಜಕಾರಣಕ್ಕೆ ಧುಮುಕಿದ ಅಪರೂಪದ ಘಟನೆ ಕರ್ನಾಟಕದಲ್ಲಿ ನಡೆದಿದೆ.
ಚಿತ್ತಾಪುರ ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಡಾ. ಸುಭಾಷ್ ಚಂದ್ರ ರಾಥೋಡ್ ರಾಜಕೀಯಕ್ಕೆ ಧುಮುಕುವ ಮನಸ್ಸು ಮಾಡಿದವರು.
ನ್ಯಾಯಾಂಗ ಇಲಾಖೆಯಲ್ಲಿ ಜಡ್ಜ್ ಆಗಿ ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಹೆಸರು ಮಾಡಿರುವ ರಾಥೋಡ್ ಇದೀಗ ತಮ್ಮ ನ್ಯಾಯಾಂಗ ಸೇವೆಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಪ್ರವೇಶ ಮಾಡಲು ಸಜ್ಜಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಅವರು ತಯಾರಿ ನಡೆಸಿದ್ದಾರೆ. ಅದಕ್ಕಾಗಿ ಅವರು ಚಿತ್ತಾಪುರ ಕಂಬಳೇಶ್ವರ ಮಠಕ್ಕೆ ಭೇಟಿ ನೀಡಿ ಮಠಾಧಿಪತಿ ಸೋಮಶೇಖರ ಶಿವಾಚಾರ್ಯ ಅವರ ಆಶೀರ್ವಾದ ಪಡೆದಿದ್ದಾರೆ.
2023ರ ಜನವರಿ 18ರಂದು ನ್ಯಾಯಾಂಗ ಇಲಾಖೆಯ ತಮ್ಮ ನ್ಯಾಯಾಧೀಶರ ಹುದ್ದೆಗೆ ರಾಜಿನಾಮೆ ನೀಡಿರುವ ರಾಥೋಡ್ ಅವರು ಫೆಬ್ರವರಿ 3ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ.
ಈಗಾಗಲೇ ಚಿತ್ತಾಪುರದಲ್ಲಿ ಬಾಡಿಗೆ ಮನೆ ಮಾಡಿರುವ ಅವರು, ಕಾರ್ಯಕರ್ತರ, ಮತದಾರರ ಅನುಕೂಲಕ್ಕಾಗಿ ಪಕ್ಷದ ಕಚೇರಿಯನ್ನು ತೆರೆದಿದ್ದಾರೆ. ಫೆಬ್ರವರಿ ನಾಲ್ಕರಿಂದ ತಮ್ಮದೇ ಕಾರ್ಯಕರ್ತರ ಪಡೆ ತಯಾರಿಸಿ ಚುನಾವಣಾ ಪ್ರಚಾರ ಯಾತ್ರೆ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಹಳೆಯ ಕಾರ್ಯಕರ್ತರು ಮುಖಂಡರನ್ನು ಮತ್ತು ಅಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೇರೆ ಪಕ್ಷಕ್ಕೆ ಹೋದ ಮುಖಂಡರನ್ನು, ಅಭಿಮಾನಿ ಬಂಧುಗಳನ್ನು ಮತ್ತೆ ಪಕ್ಷಕ್ಕೆ ಕರೆತಂದು ಚುನಾವಣೆಯ ಕಣದಲ್ಲಿ ಯಶಸ್ವಿಯಾಗಿ ಹೋರಾಟ ನಡೆಸುವುದಾಗಿ ಡಾ. ಸುಭಾಷ್ ಚಂದ್ರ ವಿಶ್ವಾಸದಿಂದ ಹೇಳಿದ್ದಾರೆ
ಸುಭಾಷ್ ಚಂದ್ರ ಅವರ ಕುರಿತು...
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದ ನಿವಾಸಿಯಾಗಿರುವ ಸುಭಾಷ್ ಚಂದ್ರ ಅವರು ಕಾರ್ಮಿಕರ ಕಾನೂನು ವಿಷಯದಲ್ಲಿ ಪಿ ಎಚ್ ಡಿ ಪದವಿ ಪಡೆದುಕೊಂಡ ಕರ್ನಾಟಕದ ಮೊದಲ ಲಂಬಾಣಿಗ ಪದವೀದರ ಎಂಬ ಖ್ಯಾತಿ ಪಡೆದಿದ್ದಾರೆ.
2016ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಆರಂಭಿಸಿದ ಅವರು ವಿದ್ಯಾವಂತ ಮತ್ತು ಪ್ರಾಮಾಣಿಕರ ಸಂಖ್ಯೆ ರಾಜಕೀಯ ಕ್ಷೇತ್ರದಲ್ಲಿ ದಿನೇ ದಿನೇ ಕಡಿಮೆಯಾಗುತ್ತಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪವಿತ್ರವಾಗಿ ಇರಬೇಕಾಗಿದ್ದ ರಾಜಕೀಯ ವ್ಯವಸ್ಥೆ ಇದೀಗ ಹದಗೆಟ್ಟು ಹೋಗುತ್ತಿದೆ. ಅದಕ್ಕಾಗಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಾನು ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ ಸಮಾಜ ಸೇವೆ ಮತ್ತು ವಕೀಲ ವೃತ್ತಿ ಜೊತೆಗೆ ರಾಜಕೀಯ ರಂಗದಲ್ಲಿ ಬದಲಾವಣೆ ತರಲು ರಾಜಕೀಯಕ್ಕೆ ಕಾಲಿಟ್ಟಿರುವುದಾಗಿ ತಮ್ಮ ಮನದಾಳದ ಮಾತನ್ನು ಅವರು ಬಿಚ್ಚಿಟ್ಟಿದ್ದಾರೆ.