![ಅಧಿಕಾರಿಗಳ ಲಂಚದ ಬೇಡಿಕೆ: ಆರೋಪ ಋಜುವಾತಿಗೆ ಈ ಅಂಶ ಅಗತ್ಯವಾಗಿ ಬೇಕು ಅಧಿಕಾರಿಗಳ ಲಂಚದ ಬೇಡಿಕೆ: ಆರೋಪ ಋಜುವಾತಿಗೆ ಈ ಅಂಶ ಅಗತ್ಯವಾಗಿ ಬೇಕು](https://blogger.googleusercontent.com/img/b/R29vZ2xl/AVvXsEh4Q3NCFsO4KQIJOzXFy_4fELJPkLEM3vVxsTjyxxN5eX4oluLTbiYSi2ocd0LBJu1hmB-io7dYBjxgj-BbEgsKITwUSGQ06n3iwhpVn6kFWlIahVMNpmmkAekU-Q3RQln88RqUfb1YxWFahw2PtlUjHCc0NVAuFL4o1VLiRZYjxQDFcjF51mCAC8w8IwGz/w640-h360/Bribe%20Corruption.png)
ಅಧಿಕಾರಿಗಳ ಲಂಚದ ಬೇಡಿಕೆ: ಆರೋಪ ಋಜುವಾತಿಗೆ ಈ ಅಂಶ ಅಗತ್ಯವಾಗಿ ಬೇಕು
ಅಧಿಕಾರಿಗಳ ಲಂಚದ ಬೇಡಿಕೆ: ಆರೋಪ ಋಜುವಾತಿಗೆ ಈ ಅಂಶ ಅಗತ್ಯವಾಗಿ ಬೇಕು
ಸರ್ಕಾರಿ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟರೆ, ಆರೋಪಿಗೆ ಶಿಕ್ಷೆ ನೀಡುವಂತಾಗಲು ಅದನ್ನು ನ್ಯಾಯಾಲಯದಲ್ಲಿ ಋಜುವಾತು ಪಡಿಸಬೇಕು. ಆಗ, ನ್ಯಾಯಾಲಯ ಸಾಕ್ಷಿಯನ್ನು ಪರಿಶೀಲಿಸುತ್ತದೆ. ಆದರೆ, ಶಿಕ್ಷೆ ಖಚಿತವಾಗಿ ಸಿಗುವಂತಾಗಲು ಲಂಚದ ಬೇಡಿಕೆ ಅಂಶ ಅತ್ಯಗತ್ಯವಾಗಿದೆ.
ಗದಗದ ನಿವೃತ್ತ ಉಪ ನೋಂದಣಾಧಿಕಾರಿ ಶ್ರೀಕಾಂತ್ ತಮ್ಮ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂಬ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಂಶವನ್ನು ಸ್ಪಷ್ಟಪಡಿಸಿದೆ.
ಸೂಕ್ತ ದಾಖಲಗಳೇ ಇಲ್ಲದ ಈ ಪ್ರಕರಣದ ವಿಚಾರಣೆ ಮುಂದುವರಿಸಿದ್ದಲ್ಲಿ ಕಾನೂನಿನ ದುರ್ಬಳಕೆಯಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.
2019ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅನಾಮಧೇಯ ದೂರೊಂದನ್ನು ದಾಖಲಿಸಿ ಗದಗ ಜಿಲ್ಲಾ ಉಪ ನೋಂದಣಾಧಿಕಾರಿ ಕಚೇರಿಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಲಂಚದ ಹಣದ ಸಮೇತ ಆಗಿನ ಉಪ ನೋಂದಣಾಧಿಕಾರಿ ಶ್ರೀಕಾಂತ್ ಅವರನ್ನು ಬಂಧಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಸಂಜ್ಞೇಯತೆಯನ್ನು ಪಡೆದ ವಿಚಾರಣಾ ನ್ಯಾಯಾಲಯ ಪ್ರಕ್ರಿಯೆಯನ್ನು ಮುಂದುವರಿಸಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಆರೋಪಿ ಶ್ರೀಕಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆರೋಪಿಯಿಂದ ವಶಪಡಿಸಿಕೊಂಡಿರುವ ಹಣ ಲಂಚದ್ದೇ ಎಂಬ ಬಗ್ಗೆ ಸೂಕ್ತ ಪುರಾವೆಗಳು ಇಲ್ಲ ಎಂದು ತೀರ್ಮಾನಿಸಿ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿತು.