
ಸ್ತನ ಹಿಡಿದರೆ, ಲಾಡಿ ಕಳಚಿದರೆ ಅತ್ಯಾಚಾರ ಯತ್ನವಲ್ಲ: ನ್ಯಾಯಾಂಗ ವಲಯದಲ್ಲಿ ಚರ್ಚೆಯ ಬಿರುಗಾಳಿ ಎಬ್ಬಿಸಿದ ಅಲಹಾಬಾದ್ ಹೈಕೋರ್ಟ್ ವಿವಾದಾತ್ಮಕ ತೀರ್ಪು
ಸ್ತನ ಹಿಡಿದರೆ, ಲಾಡಿ ಕಳಚಿದರೆ ಅತ್ಯಾಚಾರ ಯತ್ನವಲ್ಲ: ನ್ಯಾಯಾಂಗ ವಲಯದಲ್ಲಿ ಚರ್ಚೆಯ ಬಿರುಗಾಳಿ ಎಬ್ಬಿಸಿದ ಅಲಹಾಬಾದ್ ಹೈಕೋರ್ಟ್ ವಿವಾದಾತ್ಮಕ ತೀರ್ಪು
ಅಪ್ರಾಪ್ತ ಸಂತ್ರಸ್ತೆಯ ಸ್ತನ ಹಿಡಿಯುವುದು, ಆಕೆ ಧರಿಸಿದ್ದ ಪೈಜಾಮಾದ ಲಾಡಿ ಕಳಚುವುದು ಹಾಘೂ ಆಕೆಯನ್ನು ಬಲವಂತವಾಗಿ ಕಿರಿದಾದ ಸೇತುವೆಯೊಂದರ ಕೆಳಗೆ ಎಳೆಯೊಯ್ಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ವಿವಾದಾತ್ಮಕ ತೀರ್ಪು ನೀಡಿದೆ.
ಹೈಕೋರ್ಟ್ನ ನ್ಯಾಯಮೂರ್ತಿ ರಾಮ ಮನೋಹರ್ ನಾರಾಯಣ ಮಿಶ್ರಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಈ ತೀರ್ಪು ನ್ಯಾಯಾಂಗ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅತ್ಯಾಚಾರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 376 (ಅತ್ಯಾಚಾರ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯ 18 (ಅಪರಾಧ ಮಾಡಲು ಪ್ರಯತ್ನಸಿದ್ದಕ್ಕಾಗಿ ಶಿಕ್ಷೆ) ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ಸಮನ್ಸ್ ಆದೇಶವನ್ನು ಮಾರ್ಪಾಡು ಮಾಡುವ ವೇಳೆ ಹೈಕೋರ್ಟ್ ಈ ತೀರ್ಪು ನೀಡಿದೆ.
ಆರೋಪಿಗಳಾದ ಪವನ್ ಮತ್ತು ಆಕಾಶ್ ಅವರ ವಿರುದ್ಧ "ಸಂತ್ರಸ್ತೆಯ ಸ್ತನಗಳನ್ನು ಹಿಡಿಯಲು ಪ್ರಯತ್ನಿಸಿದರೆ, ಆಕಾಶ್ ಸಂತ್ರಸ್ತೆಯ ಕೆಳ ಉಡುಪನ್ನು ಕಳಚಲು ಪ್ರಯತ್ನಿಸಿದ್ದ. ಈ ಉದ್ದೇಶಕ್ಕೆ ಆಕೆಯ ಕೆಳ ಉಡುಪಿನ ಲಾಡಿಯನ್ನು ಸೆಳೆದು ಕಿರುಸೇತುವೆಯ ಕೆಳಗೆ ಎಳೆದೊಯ್ಯಲು ಪ್ರಯತ್ನಿಸಿದರು" ಎಂಬ ದೂರು ದಾಖಲಾಗಿತ್ತು.
ಸಾಕ್ಷಿಗಳ ಮಧ್ಯಪ್ರವೇಶದಿಂದ ಅವರು ಘಟನಾ ಸ್ಥಳ ಬಿಟ್ಟು ಓಡಿ ಹೋದರು. ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದರು ಎಂದು ಊಹಿಸಲು ಈ ಅಂಶಗಳು ಸಾಕಾಗುವುದಿಲ್ಲ. ಏಕೆಂದರೆ, ಈ ಅಂಶಗಳನ್ನು ಹೊರತುಪಡಿಸಿ, ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದರು ಎಂದು ಹೇಳಲು ಬೇರಾವ ಕೃತ್ಯವನ್ನೂ ಆರೋಪಿಸಲಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುವ ದೃಢ ನಿಶ್ಚಯ ಮಾಡಿದ್ದರೆ ಎಂದು ಸೂಚಿಸಲು ಯಾವುದೇ ದಾಖಲೆಗಳಿಲ್ಲ. ಆರೋಪಿ ಆಕಾಶ್, ಸಂತ್ರಸ್ತೆಯ ಕೆಳ ಉಡುಪಿನ ದಾರ ಎಳೆದ ನಂತರ ಸ್ವತಃ ಚಂಚಲಿತನಾದ ಎಂಬ ಯಾವುದೇ ಆರೋಪವಿಲ್ಲ ಎಂದು ನ್ಯಾಯಾಲಯ ಹೇಳಿತು.
ಆರೋಪಿಗಳ ಕೃತ್ಯದಿಂದಾಗಿ ಸಂತ್ರಸ್ತೆ ಬೆತ್ತಲೆಯಾದಳು ಅಥವಾ ವಿವಸ್ತ್ರಳಾದಲು ಎಂದು ಸಾಕ್ಷಿಗಳು ಹೇಳಿಲ್ಲ. ಸಂತ್ರಸ್ತೆಯ ಮೇಲೆ ಲಿಂಗ ಪ್ರವೇಶಿಕೆಯ ಲೈಂಗಿಕ ದೌರ್ಜನ್ಯ ಎಸಗಲು ಆರೋಪಿಗಳು ಯತ್ನಿಸಿದರು ಎಂಬ ಯಾವುದೇ ಆರೋಪ ಇಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಅತ್ಯಾಚಾರಕ್ಕೆ ಯತ್ನಿಸಿದ ಆರೋಪವನ್ನು ಹೊರಿಸಲು ಪ್ರಾಸಿಕ್ಯೂಷನ್ ಅದು ಅತ್ಯಾಚಾರಕ್ಕೆ ತೊಡಗುವ ಸಿದ್ಧತೆಯ ಹಂತವನ್ನು ಮೀರಿದೆ ಎಂಬುದನ್ನು ಸಾಬೀತುಪಡಿಸಬೇಕು. ಸಿದ್ಧತೆ ಮತ್ತು ಅಪರಾಧ ಮಾಡಲು ನಡೆಸುವ ನಿಜವಾದ ಪ್ರಯತ್ನದ ನಡುವಿನ ವ್ಯತ್ಯಾಸವು ಬದ್ಧತೆಯ ತೀವ್ರತೆಗೆ ಸಂಬಂಧಪಟ್ಟಿದ್ದಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.