
ನಿವೃತ್ತಿ ನಂತರ ಯಾವುದೇ ಹುದ್ದೆ ಪಡೆಯಲ್ಲ: ಸಿಜೆಐ ಬಿ.ಆರ್. ಗವಾಯಿ, ನಿವೃತ್ತ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ
ನಿವೃತ್ತಿ ನಂತರ ಯಾವುದೇ ಹುದ್ದೆ ಪಡೆಯಲ್ಲ: ಸಿಜೆಐ ಬಿ.ಆರ್. ಗವಾಯಿ, ನಿವೃತ್ತ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ
ನಿವೃತ್ತಿಯ ನಂತರ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಈ ವಿಷಯವನ್ನು ಘೋಷಿಸಿದ ಗವಾಯಿ ಅವರು, ನಾನು ಮತ್ತು ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಈ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ಇತ್ತೀಚೆಗೆ ನಿವೃತ್ತಿ ಹೊಂದಿದ್ದ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರೂ ಇದೇ ನಿರ್ಧಾರ ಪ್ರಕಟಿಸಿ ಆದರ್ಶಪ್ರಾಯ ನಿರ್ಧಾರಕ್ಕೆ ಮೇಲ್ಪಂಕ್ತಿ ಹಾಕಿದ್ದರು.
ಓಕಾ ಬಗ್ಗೆ ಮಾತನಾಡಿದ ಗವಾಯಿ ಅವರು, ಓಕಾ ಅವರ ನಿವೃತ್ತಿಯಿಂದ ಸುಪ್ರೀಂ ಕೋರ್ಟ್ನಲ್ಲಿ ಅವರ ಅನುಪಸ್ಥಿತಿ ನನ್ನನ್ನು ಕಾಡಲಿದೆ. ಅವರೊಬ್ಬ ಕಾನೂನು ಮತ್ತು ನೈತಿಕತೆಯ ಪ್ರಾಚಾರ್ಯರು ಎಂದು ಶ್ಲಾಘಿಸಿದ್ದರು.
ಓಕಾ ಅವರು ಕಲಾಪ ನಡೆಸುವ ರೀತಿ ಮತ್ತು ವಕೀಲರ ಜೊತೆಗೆ ಅವರು ನಡೆದುಕೊಳ್ಳುವ ರೀತಿಯನ್ನು ಬಣ್ಣಿಸಿದ ನ್ಯಾ. ಆಗಸ್ಟಿನ್ ಜಾರ್ಜ್ ಮಸೀಹ್, ಓಕಾ ಅವರಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ ಎಂದು ಹೇಳಿದರು.
ಕುಟುಂಬಕ್ಕೂ ಸ್ವಲ್ಪ ಸಮಯ ನೀಡಿ. ಕಠಿಣ ಪರಿಶ್ರಮಿಯಾದ ಓಕಾ ಅವರು ನಿದ್ರಿಸುವುದೇ ಕಡಿಮೆ ಎಂದು ಕಿವಿಮಾತು ಹೇಳಿದರು.