
ಸ್ಪಷ್ಟ ಆದೇಶವಿದ್ದಾಗ ಮಾತ್ರ ನಾಪತ್ತೆಯಾದವರ ಆಧಾರ್ ವಿವರ ಒದಗಿಸಿ: ಆಧಾರ್ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
ಸ್ಪಷ್ಟ ಆದೇಶವಿದ್ದಾಗ ಮಾತ್ರ ನಾಪತ್ತೆಯಾದವರ ಆಧಾರ್ ವಿವರ ಒದಗಿಸಿ: ಆಧಾರ್ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
ನಾಪತ್ತೆಯಾದವರು ಕೊನೆಯದಾಗಿ ಆಧಾರ್ ಬಳಸಿದ ಬಗ್ಗೆ ವಿವರ ಒದಗಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ಯನ್ನು ಧಾರವಾಡ ಪೀಠದಲ್ಲಿ ಆಲಿಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ನಾಪತ್ತೆಯಾಗಿರುವ ವ್ಯಕ್ತಿಯನ್ನು ಹುಡುಕುವ ದೂರಿನ ತನಿಖೆಗಾಗಿ ಆತ ನಾಪತ್ತೆಯಾಗಿರುವ ಕೊನೆಯ ಬಾರಿ ಆಧಾರ್ ಕಾರ್ಡ್ ಬಳಕೆ ಮಾಡಿದ್ದ ಸ್ಥಳದ ವಿವರಗಳನ್ನು ಒದಗಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
''ತನಿಖೆಯ ವೇಳೆ ಪೊಲೀಸರಾಗಲಿ ಅಥವಾ ಇತರೆ ಯಾವುದೇ ಸಂಸ್ಥೆಯಾಗಲೀ ದೃಢೀಕರಣ ಸೇರಿದಂತೆ ಆಧಾರ್ ಬಳಕೆ ಮಾಡಬೇಕಾಗಿ ಬಂದರೆ ಅಂತಹ ಸಂದರ್ಭಗಳಲ್ಲಿ ಆಧಾರ್ ಕಾಯಿದೆ- 2016ರ ಸೆಕ್ಷನ್ 33ರ ತ ಅನ್ವಯ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಬೇಕು. ಹೈಕೋರ್ಟ್ ಯುಐಡಿಎಐಗೆ ಆಧಾರ್ ವಿವರ ಬಳಸಿಕೊಳ್ಳಲು ಮತ್ತು ಅದನ್ನು ಕೊನೆಯದಾಗಿ ಯಾವ ಸ್ಥಳದಲ್ಲಿ ಬಳಕೆ ಮಾಡಲಾಗಿದೆ ಎಂಬ ವಿವರಗಳನ್ನು ಒದಗಿಸಲು ಸೂಕ್ತ ಆದೇಶಗಳನ್ನು ಹೊರಡಿಸಲು ಸಮಯ ಮತ್ತು ಅವಕಾಶ ನೀಡುವ ಮೂಲಕ ಆದೇಶಗಳನ್ನು ನೀಡಲಿದೆ.'" ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
"2019ರಿಂದ ತಮ್ಮ ಪುತ್ರ ಕಾಣೆಯಾಗಿದ್ದಾನೆ. ಈವರೆಗೂ ಪತ್ತೆಯಾಗಿಲ್ಲ ಆದರೆ, 2023ರ ಜೂನ್ 20ರಂದು ನಾಪತ್ತೆಯಾದ ಪುತ್ರನ ಆಧಾರ್ ಬಳಕೆ ದೃಢೀಕರಣವಾಗಿರುವ ಮಾಹಿತಿ ಇದೆ ಹಾಗಾಗಿ, ತನಿಖೆಗೆ ಆ ವಿವರಗಳನ್ನು ಒದಗಿಸಬೇಕು,'' ಎಂದು ಕೋರಿ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ಈ ಆದೇಶ ಹೊರಡಿಸಿದೆ.
"ಆಧಾರ್ ಕಾಯಿದೆಯ ಸೆಕ್ಷನ್ 29ರಡಿ ಮಾಹಿತಿ ನೀಡಲು ನಿರ್ಬಂಧವಿದೆ. ಆದರೆ, ಆ ನಿರ್ಬಂಧ ಮೂಲ ಬಯೋಮೆಟ್ರಿಕ್ ಮಾಹಿತಿಗಷ್ಟೇ. ಯಾರಾದರೂ ನಿರ್ದಿಷ್ಟವಾಗಿ ಅರ್ಜಿ ಸಲ್ಲಿಸಿದಾಗ ಆಧಾರ್ ಸಂಖ್ಯೆ, ಸೂಕ್ತ ಬಯೋಮೆಟ್ರಿಕ್ ಮಾಹಿತಿ ಮತ್ತು ಡೆಮೋಗ್ರಾಫಿಕ್ ಮಾಹಿತಿ ಒದಗಿಸಬೇಕಾಗುತ್ತದೆ ಮತ್ತು ಕೆಲವೊಂದು ಸಂದರ್ಭಗಳಲ್ಲಿ ತನಿಖೆಯ ಉದ್ದೇಶಕ್ಕೆ ಅಗತ್ಯ ಮಾಹಿತಿ ಒದಗಿಸುವಂತೆ ಯುಐಡಿಎಐಗೆ ನ್ಯಾಯಾಲಯಗಳು ನಿರ್ದೇಶನಗಳನ್ನು ನೀಡಬಹುದಾಗಿದೆ. ಹಾಗಾಗಿ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ನಾಪತ್ತೆಯಾಗಿರುವ ಪುತ್ರನ ಆಧಾರ್ ಬಳಕೆ ಬಗ್ಗೆ ದೂರು ನೀಡಿದ 15 ದಿನಗಳ ಹಿಂದಿನಿಂದ ಹಿಡಿದು ಈವರೆಗೆ ಎಲ್ಲಾ ಮಾಹಿತಿಯನ್ನು 15 ದಿನಗಳಲ್ಲಿ ತನಿಖಾಧಿಕಾರಿಗೆ ಒದಗಿಸಬೇಕು. ತನಿಖಾಧಿಕಾರಿ ಆ ಮಾಹಿತಿಯನ್ನು ತನಿಖೆಯ ಉದ್ದೇಶಕ್ಕೆ ಹೊರತುಪಡಿಸಿ ಇತರೆ ಯಾರೊಂದಿಗೂ ಹಂಚಿಕೊಳ್ಳಬಾರದು," ಎಂದು ನ್ಯಾಯಾಲಯ ಆದೇಶ ನೀಡಿತು.
ತಮ್ಮ ಮಗನ ಆಧಾರ್ ಬಳಕೆ ವಿವರ ಒದಗಿಸುವಂತೆ ಅರ್ಜಿದಾರರು ಯುಐಡಿಎಐ ಗೆ 2024ರ ಮೇ 10ರಂದು ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಪ್ರಾಧಿಕಾರ ಪರಿಗಣಿಸಿರಲಿಲ್ಲ. ಹಾಗಾಗಿ, ಅವರು ಹೈಕೋರ್ಟ್ನ ಮೊರೆ ಹೋಗಿದ್ದರು.