ಪರ್ಯಾಯ ಸಂಘದ ಅಸ್ತಿತ್ವ, ರಾಜ್ಯ ವಕೀಲರ ಸಂಘದ ಚುನಾವಣೆ: ನೋಟೀಸ್ ಬಳಿಕ ವಿಚಾರಣೆ ನಡೆಸಲಿರುವ ಹೈಕೋರ್ಟ್
ಪರ್ಯಾಯ ಸಂಘದ ಅಸ್ತಿತ್ವ, ರಾಜ್ಯ ವಕೀಲರ ಸಂಘದ ಚುನಾವಣೆ: ನೋಟೀಸ್ ಬಳಿಕ ವಿಚಾರಣೆ ನಡೆಸಲಿರುವ ಹೈಕೋರ್ಟ್
ಪರ್ಯಾಯ ಸಂಘ ಸ್ಥಾಪಿಸಲು ಮುಂದಾದ ಪದಾಧಿಕಾರಿಗಳು ಬೆಂಗಳೂರು ವಕೀಲರ ಸಂಘದಲ್ಲಿ ಯಾವುದೇ ಸೌಲಭ್ಯ ಬಳಕೆ ಮಾಡಲು ನಿರ್ಬಂಧಿಸುವುದಿಲ್ಲ ಎಂದು ಬೆಂಗಳೂರು ವಕೀಲರ ಸಂಘ ಹೈಕೋರ್ಟ್ಗೆ ಲಿಖಿತವಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲೂ ಮುಂದಿನ ಹೆಜ್ಜೆ ಇಡದಂತೆ ಹೈಕೋರ್ಟ್ ಬಾರ್ ಅಸೋಸಿಯೇಷನ್ಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಆಗಸ್ಟ್ 28ರಂದು ವಿಶೇಷ ಸಾಮಾನ್ಯ ಸಭೆ ನಡೆಸಿದ್ದ ಬೆಂಗಳೂರು ವಕೀಲರ ಸಂಘ, ಪರ್ಯಾಯ ಸಂಘ ಸ್ಥಾಪಿಸಲು ಮುಂದಾದ ಸದಸ್ಯರನ್ನು ಅಮಾನತುಗೊಳಿಸಿ ನಿರ್ಣಯ ಕೈಗೊಂಡಿತ್ತು. ಇದು ಕಾನೂನುಬಾಹಿರವಾಗಿದ್ದು, ಈ ನಿರ್ಣಯವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಟಿ.ಎ. ರಾಜಶೇಖರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರಿಗೆ ಸೌಲಭ್ಯ ನಿರಾಕರಿಸುವುದಿಲ್ಲ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ನೀಡಿದ ಹೇಳಿಕೆಯನ್ನು ಹೈಕೋರ್ಟ್ ದಾಖಲಿಸಿಕೊಂಡಿತು. ಹೊಸ ಸಂಘದ ನೋಂದಣಿಯನ್ನೇ ಪ್ರಶ್ನಿಸಿರುವುದರಿಂದ ಈ ದಿಸೆಯಲ್ಲಿ ಯಾವುದೇ ಕಾರ್ಯಪ್ರವೃತ್ತರಾಗಬಾರದು ಎಂದು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು ವಕೀಲರ ಸಂಘ, ರಾಜ್ಯ ವಕೀಲರ ಪರಿಷತ್ತು ಮತ್ತು ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರ್ ಅವರಿಗೆ ನೋಟೀಸ್ ಜಾರಿ ಮಾಡಿ ಈ ಸಂಬಂಧ ಅರ್ಜಿಯನ್ನು ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೈಕೋರ್ಟ್ ತಿಳಿಸಿದೆ. ಇದರ ಜೊತೆಗೆ ಕೆಎಸ್ಬಿಸಿ ಚುನಾವಣೆಗೆ ಸಂಬಂಧಿಸಿದ ಅರ್ಜಿಯನ್ನೂ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.