
'ಭಕ್ತರ ಕಾಣಿಕೆ ಹಣದಿಂದ ಕಲ್ಯಾಣ ಮಂಟಪ ನಿರ್ಮಾಣ ಸಲ್ಲದು: ಸುಪ್ರೀಂ ಕೋರ್ಟ್ ತಾಕೀತು
'ಭಕ್ತರ ಕಾಣಿಕೆ ಹಣದಿಂದ ಕಲ್ಯಾಣ ಮಂಟಪ ನಿರ್ಮಾಣ ಸಲ್ಲದು: ಸುಪ್ರೀಂ ಕೋರ್ಟ್ ತಾಕೀತು
ದೇವಸ್ಥಾನ, ಮಂದಿರಗಳಿಗೆ ಭಕ್ತರು ನೀಡುವ ಕಾಣಿಕೆಯು ಕಲ್ಯಾಣ ಮಂಟಪಗಳನ್ನು ನಿರ್ಮಿಸುವ ಉದ್ದೇಶಕ್ಕೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಈ ಕುರಿತ ಮೇಲ್ಮನವಿಯ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಹಾಗೂ ಸಂದೀಪ ಮೆಹ್ರಾ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
'ಕಲ್ಯಾಣ ಮಂಟಪಗಳನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಭಕ್ತರು ಕಾಣಿಕೆ ನೀಡುವುದಿಲ್ಲ. ಭಕ್ತರು ನೀಡುವ ಹಣವನ್ನು ದೇಗುಲಗಳ ಸುಧಾರಣೆಗೆ ಬಳಕೆ ಮಾಡಬೇಕು' ಎಂದು ನ್ಯಾಯಪೀಠ ಹೇಳಿದೆ.
ತಮಿಳುನಾಡಿನ ಐದು ದೇವಸ್ಥಾನಗಳ ನಿಧಿಯನ್ನು ಬಳಸಿ, ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಅನುಮತಿ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ವಜಾಗೊಳಿಸಿ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠವು ಆಗಸ್ಟ್ 19ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠವು, ಮಧುರೈ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಕಾಣಿಕೆ ಬಳಸಿ ಕಲ್ಯಾಣ ಮಂಟಪಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆಗೆ ಕೊಡಬೇಕು ಎಂಬ ಸರ್ಕಾರದ ನಿರ್ಧಾರವು 'ಧಾರ್ಮಿಕ ಉದ್ದೇಶ'ಗಳ ವ್ಯಾಪ್ತಿಗೆ ಬರುವುದಿಲ್ಲ. ಈ ಹಣವನ್ನು ಸಾರ್ವಜನಿಕ ಅಥವಾ ಸರ್ಕಾರದ ನಿಧಿ ಎಂಬುದಾಗಿ ಪರಿಗಣಿಸಬಾರದು' ಎಂದೂ ಮಧುರೈ ಹೈಕೋರ್ಟ್ ಪೀಠ ಹೇಳಿತ್ತು.
ವಿಚಾರಣೆ ವೇಳೆ, 'ದೇವಸ್ಥಾನ ಆವರಣದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪದಲ್ಲಿ ಒಂದು ಮದುವೆ ಸಮಾರಂಭವಿತ್ತು ಎಂದು ಭಾವಿಸೋಣ. ಅಲ್ಲಿ, ಎಲ್ಲ ರೀತಿಯ ಅಶ್ಲೀಲ ಹಾಡುಗಳನ್ನು ಹಾಡಲಾಗುತ್ತದೆ. ಈ ರೀತಿ ಮಾಡುವುದರಿಂದ ದೇವಸ್ಥಾನದ ಜಾಗದ ಬಳಕೆಯ ಉದ್ದೇಶ ಈಡೇರಿದಂತಾಗಲಿದೆಯೇ' ಎಂದು ಪ್ರಶ್ನಿಸಿದೆ.
‘ಕಲ್ಯಾಣ ಮಂಟಪಗಳನ್ನು ನಿರ್ಮಿಸಬೇಕು ಎನ್ನುವ ಸರ್ಕಾರದ ನಿರ್ಧಾರ ಸರಿಯೋ?, ತಪ್ಪಿದೆಯೋ ಎಂಬುದೇ ನಮ್ಮ ಮುಂದಿರುವ ವಿಚಾರ. ಹೀಗಾಗಿ, ಈ ಹಂತದಲ್ಲಿ ನಾವು ಯಾವುದೇ ತಡೆಯಾಜ್ಞೆ ನೀಡುವುದಿಲ್ಲ' ಎಂದ ಪೀಠ, ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿತು.