ಅಧಿಕಾರಿಗಳ ವರ್ಗಾವಣೆಗೆ ಹೈಕೋರ್ಟ್ ನೂತನ ಮಾರ್ಗಸೂಚಿ: ಪೋಸ್ಟಿಂಗ್ ನೀಡದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ- ಕರ್ನಾಟಕ ಹೈಕೋರ್ಟ್
ಅಧಿಕಾರಿಗಳ ವರ್ಗಾವಣೆಗೆ ಹೈಕೋರ್ಟ್ ನೂತನ ಮಾರ್ಗಸೂಚಿ: ಪೋಸ್ಟಿಂಗ್ ನೀಡದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ- ಕರ್ನಾಟಕ ಹೈಕೋರ್ಟ್
ರಾಜ್ಯ ಸರ್ಕಾರವು ಯಾವುದೇ ಅಧಿಕಾರಿಯನ್ನು ಅಥವಾ ನೌಕರರನ್ನು ವರ್ಗಾವಣೆ ಮಾಡುವಾಗ ಒಂದೇ ವೇಳೆ ಅವರಿಗೆ ಹೊಸ ಪೋಸ್ಟಿಂಗ್ ನೀಡದೇ ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಇಂತಹ ವರ್ಗಾವಣೆಗಳಿಂದ ಅಧಿಕಾರಿಗಳು ಕಡ್ಡಾಯ ನಿರೀಕ್ಷಾ ಅವಧಿಯಲ್ಲಿ (compulsory waiting period) ಕೆಲಸವಿಲ್ಲದೆ ವೇತನ ಪಡೆಯುವ ಸ್ಥಿತಿ ಉಂಟಾಗುತ್ತದೆ ಮತ್ತು ಸಾರ್ವಜನಿಕ ನಿಧಿಗಳು ವ್ಯರ್ಥವಾಗುತ್ತವೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಪೋಸ್ಟಿಂಗ್ ನೀಡದೆ ಅಧಿಕಾರಿಗಳನ್ನು ರಿಲೀವ್ ಮಾಡುವುದನ್ನು ತಡೆಯುವ ಹಾಗೂ ಕಡ್ಡಾಯ ನಿರೀಕ್ಷಾ ಅವಧಿಯಲ್ಲಿ ಪಾವತಿಸಿದ ವೇತನವನ್ನು ಹೊಣೆಗಾರ ಅಧಿಕಾರಿಗಳಿಂದ ವಸೂಲು ಮಾಡುವಂತಹ ರಚನಾತ್ಮಕ ಮಾರ್ಗಸೂಚಿಗಳನ್ನು ನ್ಯಾಯಾಲಯ ಹೊರಡಿಸಿದೆ.
ಪೋಸ್ಟಿಂಗ್ ನೀಡದೆ ಇನ್ನೊಬ್ಬ ಅಧಿಕಾರಿಯನ್ನು ನಿಯೋಜಿಸುವ ಮೂಲಕ ತನ್ನನ್ನು ಬದಲಿಸಿದ ವರ್ಗಾವಣೆ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಆಡಳಿತ ನ್ಯಾಯಮಂಡಳಿ (Administrative Tribunal) ಆ ಅಧಿಸೂಚನೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು.
ಅರ್ಜಿಯನ್ನು ತೀರ್ಮಾನಿಸುವ ಸಂದರ್ಭದಲ್ಲಿ, “ಸರ್ಕಾರವು ಅಧಿಕಾರಿಗೆ/ನೌಕರರಿಗೆ ಪೋಸ್ಟಿಂಗ್ ನೀಡದೆ ವರ್ಗಾವಣೆ ಮಾಡಬಾರದು. ಪೋಸ್ಟಿಂಗ್ ನೀಡದೆ ವರ್ಗಾವಣೆ ಮಾಡಿದರೂ, ಅವರಿಗೆ ಹೊಸ ಪೋಸ್ಟಿಂಗ್ ನೀಡುವವರೆಗೆ ಅವರನ್ನು ರಿಲೀವ್ ಮಾಡಬಾರದು” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪ್ರಕರಣದ ಹಿನ್ನೆಲೆ:
ಅರ್ಜಿದಾರರು ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನಿಯೋಜಿಸುವ ಅಧಿಸೂಚನೆ ಹೊರಡಿಸಲಾಯಿತು. ಆದರೆ ಅವರಿಗೆ ಯಾವುದೇ ಪೋಸ್ಟಿಂಗ್ ನೀಡದೆ, ಕೇವಲ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಸೂಚಿಸಲಾಯಿತು.
ಅವರು ಸೂಚನೆಯಂತೆ ಹಾಜರಾದರೂ, ದೀರ್ಘಕಾಲದವರೆಗೆ ಯಾವುದೇ ಪೋಸ್ಟಿಂಗ್ ನೀಡಲಾಗಲಿಲ್ಲ. ಇದರಿಂದ ಅವರು ಆಡಳಿತ ನ್ಯಾಯಮಂಡಳಿಯನ್ನು ಸಂಪರ್ಕಿಸಿ, ತನ್ನನ್ನು ಬದಲಿಸಿದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಮತ್ತು ಪೋಸ್ಟಿಂಗ್ ನೀಡುವಂತೆ ಮನವಿ ಮಾಡಿದರು.
ನ್ಯಾಯಮಂಡಳಿ ಅರ್ಜಿಯನ್ನು ತಳ್ಳಿಹಾಕಿ, ಅರ್ಜಿದಾರರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದರಿಂದ ಮತ್ತು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾದ ನಂತರ ವರ್ಗಾವಣೆ ಜಾರಿಯಾಗಿದೆ; ಅದನ್ನು ಬದಲಿಸಲಾಗುವುದಿಲ್ಲ ಎಂದು ಹೇಳಿತು.
ಈ ತೀರ್ಮಾನವನ್ನು ಹಾಗೂ ವರ್ಗಾವಣೆ ಅಧಿಸೂಚನೆಯನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಅನ್ನು ಸಂಪರ್ಕಿಸಿದರು.
ನ್ಯಾಯಾಲಯದ ಗಮನಾರ್ಹ ಅಭಿಪ್ರಾಯ
ಪೋಸ್ಟಿಂಗ್ ನೀಡದೆ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಸೂಚಿಸಿ ಅರ್ಜಿದಾರರನ್ನು ಬದಲಿಸಿದ ಅಧಿಸೂಚನೆಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಮಂಡಳಿ ನಿರಾಕರಿಸಿದ ಕ್ರಮ ಕಾನೂನುಬದ್ಧವೇ ಎಂಬುದನ್ನು ನ್ಯಾಯಾಲಯ ಮೊದಲಿಗೆ ಪರಿಶೀಲಿಸಿತು.
ಅರ್ಜಿದಾರರು ಸೂಚನೆಯಂತೆ ಹಾಜರಾದರೂ ಸುಮಾರು ಒಂದು ವರ್ಷ ಅವರಿಗೆ ಯಾವುದೇ ಪೋಸ್ಟಿಂಗ್ ನೀಡಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿತು.
ವಿಚಾರಣೆ ಸಂದರ್ಭದಲ್ಲಿ ನೀಡಿದ ಹಿಂದಿನ ನಿರ್ದೇಶನದಂತೆ, ರಾಜ್ಯವು ನಂತರ ಅರ್ಜಿದಾರರಿಗೆ ಪೋಸ್ಟಿಂಗ್ ನೀಡಿದ ಅಧಿಸೂಚನೆಯನ್ನು ಸಲ್ಲಿಸಿತು. ಜೊತೆಗೆ, ವಿಳಂಬಕ್ಕೆ ಕಾರಣಗಳನ್ನು ವಿವರಿಸುವ ಹಾಗೂ ಪೋಸ್ಟಿಂಗ್ ನೀಡುವ ಹೊಣೆಗಾರ ಅಧಿಕಾರಿಗಳನ್ನು ಗುರುತಿಸುವಂತೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣಪತ್ರ (affidavit) ಪಡೆಯಲಾಯಿತು.
ಅದರಲ್ಲಿನ ವಿವರಗಳ ಪ್ರಕಾರ, ಖಾಲಿ ಹುದ್ದೆಗಳು ಇದ್ದರೂ, ಅರ್ಜಿದಾರರ ಪೋಸ್ಟಿಂಗ್ ಸಂಬಂಧಿಸಿದ ಕಡತವು ವಿವಿಧ ಅಧಿಕಾರಿಗಳ ನಡುವೆ ಅನುಮೋದನೆಗಾಗಿ ಪದೇಪದೇ ಸಂಚರಿಸಿತು. ಸಚಿವ ಮಟ್ಟದ ಮತ್ತು ಉನ್ನತ ಮಟ್ಟದ ಅನುಮೋದನೆಗಳು, ಪೋಸ್ಟಿಂಗ್ ವರ್ಗದ ಮರುಪರಿಶೀಲನೆ, ಆಡಳಿತಾತ್ಮಕ ಅಗತ್ಯತೆಗಳು, ಇತರ ಅಧಿಕಾರಿಗಳನ್ನು ವರ್ಗಾಯಿಸಿದ ನ್ಯಾಯಾಂಗ ವ್ಯವಹಾರಗಳು ಹಾಗೂ ಪ್ರಕ್ರಿಯಾತ್ಮಕ ಅನುಮೋದನೆಗಳು ವಿಳಂಬಕ್ಕೆ ಕಾರಣವಾಗಿವೆ ಎಂದು ತಿಳಿಯಿತು.
ಖಾಲಿ ಹುದ್ದೆಗಳು ಇದ್ದರೂ ಸರ್ಕಾರ ತೀರ್ಮಾನ ಕೈಗೊಳ್ಳಲು ಅನಗತ್ಯ ಸಮಯ ತೆಗೆದುಕೊಂಡಿದ್ದು, ನ್ಯಾಯಾಲಯದ ನಿರ್ದೇಶನಗಳ ನಂತರವೇ ಪೋಸ್ಟಿಂಗ್ ನೀಡಲಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಪೋಸ್ಟಿಂಗ್ ನೀಡದೆ ಅಧಿಕಾರಿಯನ್ನು ವರ್ಗಾವಣೆ ಮಾಡಿ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಹೇಳುವುದು ಅವರಿಗೆ ಅನಿಶ್ಚಿತ ಸ್ಥಿತಿ ಉಂಟುಮಾಡುತ್ತದೆ ಮತ್ತು ಕೆಲಸವಿಲ್ಲದೆ ವೇತನ ಪಾವತಿಗೆ ಕಾರಣವಾಗುತ್ತದೆ; ಇದು ಸಾರ್ವಜನಿಕ ಹಣದ ದುರುಪಯೋಗ ಎಂದು ನ್ಯಾಯಾಲಯ ಒತ್ತಿಹೇಳಿತು.
ಹಿಂದಿನ ತೀರ್ಪುಗಳನ್ನು ಅವಲಂಬಿಸಿ, ಹೊಸ ಪೋಸ್ಟಿಂಗ್ ನೀಡದೆ ಅಧಿಕಾರಿಯನ್ನು ಹುದ್ದೆಯಿಂದ ತೆಗೆದು ಹಾಕುವುದು ಆಡಳಿತಾತ್ಮಕ ಶೂನ್ಯಾವಸ್ಥೆ (administrative limbo) ಉಂಟುಮಾಡುತ್ತದೆ ಮತ್ತು ಇದು ಅಸಮಂಜಸ ಪದ್ಧತಿ ಎಂದು ನ್ಯಾಯಾಲಯ ಪುನರುಚ್ಚರಿಸಿತು.
ನ್ಯಾಯಾಲಯದ ನಿರ್ದೇಶನಗಳು ಹೀಗಿವೆ.
ರಾಜ್ಯವು ಯಾವುದೇ ಅಧಿಕಾರಿಗೆ/ನೌಕರರಿಗೆ ವರ್ಗಾವಣೆಯ ಸಂದರ್ಭದಲ್ಲಿ ಪೋಸ್ಟಿಂಗ್ ನೀಡದೆ ವರ್ಗಾವಣೆ ಮಾಡಬಾರದು.
ವರ್ಗಾವಣೆಗೊಂಡ ಅಧಿಕಾರಿಗೆ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಸೂಚಿಸುವುದನ್ನು ಪೋಸ್ಟಿಂಗ್ ನೀಡಿದಂತೆ ಪರಿಗಣಿಸಲಾಗುವುದಿಲ್ಲ.
ಪೋಸ್ಟಿಂಗ್ ನೀಡದೆ ವರ್ಗಾವಣೆ ಮಾಡಿದಲ್ಲಿ, ಹೊಸ ಪೋಸ್ಟಿಂಗ್ ನೀಡುವವರೆಗೆ ಆ ಅಧಿಕಾರಿಯನ್ನು ಹಿಂದಿನ ಹುದ್ದೆಯಿಂದ ರಿಲೀವ್ ಮಾಡಬಾರದು.
ಪೋಸ್ಟಿಂಗ್ ನೀಡದೆ ವರ್ಗಾವಣೆ ಮಾಡಿ ಹಿಂದಿನ ಹುದ್ದೆಯಿಂದ ರಿಲೀವ್ ಮಾಡಿದರೆ, ಹೊಸ ಪೋಸ್ಟಿಂಗ್ ದೊರೆಯುವವರೆಗೆ ಕಡ್ಡಾಯ ನಿರೀಕ್ಷಾ ಅವಧಿಯಲ್ಲಿ ಆ ಸರ್ಕಾರಿ ನೌಕರರಿಗೆ ಪಾವತಿಸಿದ ವೇತನ ಮತ್ತು ಭತ್ಯೆಗಳನ್ನು, ವರ್ಗಾವಣೆ ಅಧಿಕಾರ ಹೊಂದಿರುವ ಅಧಿಕಾರಿಯಿಂದ ಅಂದರೆ ಸರ್ಕಾರದ ಕಾರ್ಯದರ್ಶಿ ಅಥವಾ ಇಲಾಖೆಯ ಮುಖ್ಯಸ್ಥ ಅಥವಾ ಸಂಬಂಧಿಸಿದ ಅಧಿಕಾರಿಯಿಂದ ತಕ್ಷಣ ವಸೂಲು ಮಾಡಬೇಕು.
ಅಂತಿಮ ನಿರ್ಣಯ
ವರ್ಗಾವಣೆ ಕ್ರಮವನ್ನು ನಿಯಂತ್ರಿಸುವ ಮಾರ್ಗಸೂಚಿಗಳೊಂದಿಗೆ ರಿಟ್ ಅರ್ಜಿಯನ್ನು ಹೈಕೋರ್ಟ್ ಮುಕ್ತಾಯಗೊಳಿಸಿತು. ಅಧಿಕಾರಿಗಳಿಗೆ ಪೋಸ್ಟಿಂಗ್ ನೀಡದೆ ವರ್ಗಾವಣೆ ಮಾಡದಂತೆ ರಾಜ್ಯವು ಖಚಿತಪಡಿಸಿಕೊಳ್ಳಬೇಕು ಮತ್ತು ಇಂತಹ ಆಡಳಿತಾತ್ಮಕ ತಪ್ಪುಗಳಿಂದ ಉಂಟಾಗುವ ಹಣಕಾಸು ಪರಿಣಾಮಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಇದೇ ವೇಳೆ, ಆದೇಶದ ಪ್ರತಿಯನ್ನು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿ, ಎಲ್ಲಾ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರಿಗೆ ವಿತರಿಸಲು ನ್ಯಾಯಾಲಯ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.
ಪ್ರಕರಣ ಶೀರ್ಷಿಕೆ: ಕೆ. ಅರುಣ್ ಕುಮಾರ್ ವಿರುದ್ಧ ಕರ್ನಾಟಕ ರಾಜ್ಯ ಮತ್ತಿತರರು
ಕರ್ನಾಟಕ ಹೈಕೋರ್ಟ್