-->
ಸರ್ಕಾರಿ ಭೂಮಿಯಲ್ಲಿ ಸರ್ಕಾರಿ ನೌಕರರ ಸಂಘದ ಹಕ್ಕು ನಿರಾಕರಣೆ: ಸಿವಿಲ್ ಕೋರ್ಟ್‌ ಮಹತ್ವದ ತೀರ್ಪು

ಸರ್ಕಾರಿ ಭೂಮಿಯಲ್ಲಿ ಸರ್ಕಾರಿ ನೌಕರರ ಸಂಘದ ಹಕ್ಕು ನಿರಾಕರಣೆ: ಸಿವಿಲ್ ಕೋರ್ಟ್‌ ಮಹತ್ವದ ತೀರ್ಪು

ಸರ್ಕಾರಿ ಭೂಮಿಯಲ್ಲಿ ಸರ್ಕಾರಿ ನೌಕರರ ಸಂಘದ ಹಕ್ಕು ನಿರಾಕರಣೆ: ಸಿವಿಲ್ ಕೋರ್ಟ್‌ ಮಹತ್ವದ ತೀರ್ಪು





ಮಂಗಳೂರು ಪ್ರಧಾನ ಸಿವಿಲ್ ನ್ಯಾಯಾಲಯದ ಮಹತ್ವದ ತೀರ್ಪು: ಸರ್ಕಾರಿ ಭೂಮಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹಕ್ಕು ನಿರಾಕರಣೆ


ಮಂಗಳೂರು ಪ್ರಧಾನ ಸಿವಿಲ್ ನ್ಯಾಯಾಲಯವು ಓ.ಎಸ್. ನಂ. 750/2020 ದಾವೆಯಲ್ಲಿ ದಿನಾಂಕ 19.12.2025 ರಂದು ಮಹತ್ವದ ತೀರ್ಪು ನೀಡಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಶಾಶ್ವತ ನಿರ್ಬಂಧಕಾಜ್ಞೆಗಾಗಿ ಸಲ್ಲಿಸಿದ ದಾವೆಯನ್ನು ಖರ್ಚು ಸಹಿತ ವಜಾಗೊಳಿಸಿದೆ.


ಈ ದಾವೆಯಲ್ಲಿ ವಾದಿ ಸಂಘವು ಮಂಗಳೂರು ತಾಲೂಕಿನ ಅತ್ತಾವರ ಗ್ರಾಮದ ಸರ್ವೇ ನಂ. 278/2ಬಿ ಯಲ್ಲಿರುವ 33 ಸೆಂಟ್ಸ್ ಜಾಗವು ಮೈಸೂರು ವಿಭಾಗಾಧಿಕಾರಿಗಳ 1956-57 ನೇ ಸಾಲಿನ ಆದೇಶದ ಮೂಲಕ ತಮ್ಮ ಪರವಾಗಿ ಮಂಜೂರಾಗಿದೆ ಎಂದು ಹೇಳಿ, ಆಸ್ತಿಯ ಮೇಲೆ ಸ್ವಾಧೀನ ಹೊಂದಿರುವುದಾಗಿ ಹಾಗೂ ಪ್ರತಿವಾದಿಗಳಾದ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ನಗರ ಮಾಪನ ಯೋಜನಾಧಿಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇವರುಗಳು ಅಕ್ರಮವಾಗಿ ನಿರ್ಮಾಣ ಕಾರ್ಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದ್ದರು.


ಆದರೆ, 1ನೇ ಪ್ರತಿವಾದಿ ಸಂಸ್ಥೆಯು ವಾದಿ ಸಂಘದ ಸ್ವಾಧೀನಾನುಭವ ಕಾನೂನುಬದ್ಧವಲ್ಲ ಮತ್ತು ಮೂಲ ಆದೇಶದ ದಾಖಲೆಗಳು ಲಭ್ಯವಿಲ್ಲ ಎಂದು ವಾದಿಸಿತು. ಜೊತೆಗೆ, ಸಂಬಂಧಪಟ್ಟ ಕಂದಾಯ ದಾಖಲೆಗಳು ಆಸ್ತಿಯು ಮೂಲತಃ ಸರ್ಕಾರಿ ಪೊರಂಬೊಕು (ಸಾರ್ವಜನಿಕ ಆಸ್ತಿ) ಎಂದು ತೋರಿಸುತ್ತವೆ ಎಂಬುದನ್ನು ಪ್ರತಿವಾದಿಗಳು ದಾಖಲಾತಿ ಸಾಕ್ಷ್ಯಗಳಿಂದ ನ್ಯಾಯಾಲಯಕ್ಕೆ ಸಾಬೀತುಪಡಿಸಿದರು.

ನ್ಯಾಯಾಲಯವು ವಾದಿ ಸಂಘವು ಅವಲಂಬಿಸಿರುವ ಕಂದಾಯ ದಾಖಲೆಗಳಿಗೆ ಮೂಲ ದಾಖಲೆಗಳಾದ ಮೈಸೂರು ವಿಭಾಗಾಧಿಕಾರಿಗಳ ಆದೇಶ ಲಭ್ಯವಿಲ್ಲ ಎಂಬುದನ್ನು ಗಮನಿಸಿ, ಕೇವಲ ಪಹಣಿ ಮತ್ತು ಕಂದಾಯ ದಾಖಲೆಗಳ ಆಧಾರದ ಮೇಲೆ ಮಾಲೀಕತ್ವವನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಹೇಳಿತು.


ಮೇಲಾಗಿ, ಮಾಲೀಕತ್ವ ವಿವಾದದಲ್ಲಿರುವ ಸಂದರ್ಭದಲ್ಲಿ ಕೇವಲ ಶಾಶ್ವತ ನಿರ್ಬಂಧಕಾಜ್ಞೆ ಕೇಳುವುದು ಕಾನೂನುಬದ್ಧವಲ್ಲ; ವಾದಿಯು ಮಾಲೀಕತ್ವ ಘೋಷಣೆಯ ಪರಿಹಾರವನ್ನು ಸಹ ಕೋರಬೇಕಾಗಿತ್ತು ಎಂಬ ಸರ್ವೋಚ್ಚ ನ್ಯಾಯಾಲಯದ ತತ್ವಗಳನ್ನು ನ್ಯಾಯಾಲಯ ಪುನರುಚ್ಚರಿಸಿತು.


ಇದರಿಂದ, ವಿವಾದಿತ ಆಸ್ತಿ ಮೂಲತಃ ಸರ್ಕಾರಿ ಆಸ್ತಿಯಾಗಿರುವುದರಿಂದ ಮತ್ತು ವಾದಿಯು ಕಾನೂನುಬದ್ಧ ಮಾಲೀಕತ್ವ ಹಾಗೂ ಸ್ವಾಧೀನವನ್ನು ಸಾಬೀತುಪಡಿಸಲು ವಿಫಲವಾದ ಕಾರಣ, ವಾದಿಯು ಕೇಳಿದ ಪರಿಹಾರಕ್ಕೆ ಅರ್ಹನಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿ, ದಾವೆಯನ್ನು ಖರ್ಚು ಸಹಿತ ವಜಾಗೊಳಿಸಿತು.


ಈ ತೀರ್ಪು ಕೇವಲ ಕಂದಾಯ ದಾಖಲೆಗಳ ಆಧಾರದಲ್ಲಿ ಮಾಲೀಕತ್ವ ಸ್ಥಾಪಿಸಲು ಸಾಧ್ಯವಿಲ್ಲ ಹಾಗೂ ಸರ್ಕಾರಿ ಭೂಮಿಯ ಮೇಲೆ ಖಾಸಗಿ ಹಕ್ಕು ಪ್ರತಿಪಾದಿಸಲು ಮೂಲ ದಾಖಲೆಗಳ ಅಗತ್ಯವಿದೆ ಎಂಬ ಮಹತ್ವದ ಕಾನೂನು ತತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.


ಸರ್ಕಾರಿ ಭೂಮಿ, ಕಂದಾಯ ದಾಖಲೆಗಳು ಮತ್ತು ನಿರ್ಬಂಧಕಾಜ್ಞೆ: ಓ.ಎಸ್. 750/2020 ತೀರ್ಪಿನ ಕಾನೂನು ವಿಶ್ಲೇಷಣೆ


ಮಂಗಳೂರು ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಮಲಿಂಗಪ್ಪ ಅವರು ಓ.ಎಸ್. ನಂ. 750/2020 ದಾವೆಯಲ್ಲಿ ನೀಡಿದ ತೀರ್ಪು, ಭೂಮಿಯ ಮಾಲೀಕತ್ವ, ಕಂದಾಯ ದಾಖಲೆಗಳ ಕಾನೂನು ಮೌಲ್ಯ ಮತ್ತು ನಿರ್ಬಂಧಕಾಜ್ಞೆಯ ದಾವೆಗಳ ಕುರಿತಂತೆ ಪ್ರಮುಖ ಕಾನೂನು ತತ್ವಗಳನ್ನು ಪುನರ್ ದೃಢೀಕರಿಸಿದೆ.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಅತ್ತಾವರ ಗ್ರಾಮದ ಸರ್ವೆ ನಂ. 278/2ಬಿ ಯಲ್ಲಿನ 33 ಸೆಂಟ್ಸ್ ಜಾಗದ ಮೇಲೆ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ಸಲ್ಲಿಸಿದ ದಾವೆಯನ್ನು ನ್ಯಾಯಾಲಯವು ವಜಾಗೊಳಿಸಿದ್ದು, ಈ ತೀರ್ಪು ಭೂ ಕಾನೂನು ವಿಷಯಗಳಲ್ಲಿ ಮಹತ್ವದ ಮಾರ್ಗದರ್ಶನವನ್ನು ನೀಡುತ್ತದೆ.


1. ಕಂದಾಯ ದಾಖಲೆಗಳ ಕಾನೂನು ಸ್ಥಾನಮಾನ

ನ್ಯಾಯಾಲಯವು ಕರ್ನಾಟಕ ಭೂ ಕಂದಾಯ ಅಧಿನಿಯಮದ ಕಲಂ 133 ರ ಅಡಿಯಲ್ಲಿ ಕಂದಾಯ ದಾಖಲೆಗಳ ಪ್ರಾಮಾಣಿಕತೆಯ ಬಗ್ಗೆ ಮಹತ್ವದ ಅವಲೋಕನ ಮಾಡಿದೆ. ಕಂದಾಯ ದಾಖಲೆಗಳಲ್ಲಿ ಇರುವ ನಮೂದನೆಗಳು ಪೂರ್ವಭಾವನೆಯಾಗಿ ಸತ್ಯವಾಗಿರುತ್ತವೆ, ಆದರೆ ಅವು ಅಂತಿಮ ಮಾಲೀಕತ್ವದ ಸಾಕ್ಷ್ಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


ಈ ಪ್ರಕರಣದಲ್ಲಿ, ವಾದಿ ಸಂಘವು ಪಹಣಿ ಪತ್ರಿಕೆಗಳು ಮತ್ತು ಖಾತಾ ದಾಖಲೆಗಳನ್ನು ಅವಲಂಬಿಸಿದರೂ, ಅವುಗಳಿಗೆ ಮೂಲ ಆಧಾರವಾದ ಮೈಸೂರು ವಿಭಾಗಾಧಿಕಾರಿಗಳ ಆದೇಶ (DPR 24/56-57) ಅನ್ನು ಹಾಜರುಪಡಿಸಲು ವಿಫಲವಾಯಿತು. ಕೇವಲ ಕಂದಾಯ ದಾಖಲೆಗಳ ಆಧಾರದ ಮೇಲೆ ಮಾಲೀಕತ್ವ ಸ್ಥಾಪಿಸಲಾಗುವುದಿಲ್ಲ ಎಂಬುದು ನ್ಯಾಯಾಲಯದ ಪ್ರಮುಖ ನಿರ್ಣಯವಾಗಿದೆ.


2. ಸರ್ಕಾರಿ (ಪೊರಂಬೊಕು) ಭೂಮಿಯ ಮೇಲಿನ ಖಾಸಗಿ ಹಕ್ಕು


ಪ್ರತಿವಾದಿಗಳು ಹಾಜರುಪಡಿಸಿದ ದಾಖಲೆಗಳು ಮತ್ತು ಗ್ರಾಮ ಕರಣಿಕರರ ವರದಿ ಪ್ರಕಾರ, ವಿವಾದಿತ ಭೂಮಿ ಮೂಲತಃ ಸರ್ಕಾರಿ ಸಾರ್ವಜನಿಕ ಆಸ್ತಿ (ಪೊರಂಬೊಕು) ಆಗಿತ್ತು. ನಂತರದ ಕಂದಾಯ ನಮೂದನೆಗಳು ಮೂಲ ದಾಖಲೆಗಳ ಪರಿಶೀಲನೆಯಿಲ್ಲದೆ ಯಾಂತ್ರಿಕವಾಗಿ ಮಾಡಲ್ಪಟ್ಟವು ಎಂಬುದನ್ನು ನ್ಯಾಯಾಲಯ ಗಮನಿಸಿದೆ.


ಮಂಗಳೂರು ವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶವು MR 10/91-92 ದಾಖಲಾತಿಯನ್ನು ರದ್ದುಗೊಳಿಸಿ, ಭೂಮಿಯನ್ನು ಸರ್ಕಾರದ ಹೆಸರಿನಲ್ಲಿ ಮರುನಮೂದಿಸಬೇಕೆಂದು ನಿರ್ದೇಶಿಸಿತ್ತು. ಈ ಆದೇಶವು ತಾತ್ಕಾಲಿಕ ತಡೆಯಾಜ್ಞೆಗೆ ಒಳಪಟ್ಟಿದ್ದರೂ, ಭೂಮಿಯ ಮೂಲ ಸ್ವರೂಪ ಸರ್ಕಾರಿ ಆಸ್ತಿಯೇ ಎಂಬ ಕಾನೂನು ಸತ್ಯವನ್ನು ನ್ಯಾಯಾಲಯ ಗುರುತಿಸಿದೆ.


3. ನಿರ್ಬಂಧಕಾಜ್ಞೆ ದಾವೆಗಳ ಮೂಲ ಕಾನೂನು ತತ್ವಗಳು


ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ಸ್ಥಾಪಿತ ತತ್ವಗಳನ್ನು ಪುನರುಚ್ಚರಿಸಿದೆ: ವಾದಿಯು ಸ್ವಾಧೀನಾನುಭವದಲ್ಲಿದ್ದು, ಮಾಲೀಕತ್ವ ವಿವಾದದಲ್ಲಿಲ್ಲದಿದ್ದರೆ, ಕೇವಲ ಶಾಶ್ವತ ನಿರ್ಬಂಧಕಾಜ್ಞೆ ಕೋರಿ ದಾವೆ ಸಲ್ಲಿಸಬಹುದು. ಆದರೆ, ಮಾಲೀಕತ್ವ ವಿವಾದದಲ್ಲಿದ್ದರೆ ಅಥವಾ ಪ್ರತಿವಾದಿ ಮಾಲೀಕತ್ವವನ್ನು ನಿರಾಕರಿಸಿದರೆ, ವಾದಿಯು ಕಡ್ಡಾಯವಾಗಿ ಮಾಲೀಕತ್ವ ಘೋಷಣೆಯ ಪರಿಹಾರವನ್ನು (Declaration) ಜೊತೆಗೆ ನಿರ್ಬಂಧಕಾಜ್ಞೆಯನ್ನು ಕೋರುವಂತಾಗಿದೆ.

ಸ್ವಾಧೀನದಲ್ಲಿಲ್ಲದ ವ್ಯಕ್ತಿ ಕೇವಲ ನಿರ್ಬಂಧಕಾಜ್ಞೆ ಕೋರಿ ದಾವೆ ಸಲ್ಲಿಸಲು ಸಾಧ್ಯವಿಲ್ಲ; ಅವನು ಸ್ವಾಧೀನದ ಪರಿಹಾರವನ್ನು ಕೂಡ ಕೇಳಬೇಕು.

ಈ ಪ್ರಕರಣದಲ್ಲಿ, ವಾದಿಯ ಮಾಲೀಕತ್ವವನ್ನು ಪ್ರತಿವಾದಿಗಳು ಸ್ಪಷ್ಟವಾಗಿ ಅಲ್ಲಗಳೆದಿದ್ದರಿಂದ, ವಾದಿಯು ಘೋಷಣಾತ್ಮಕ ಪರಿಹಾರವನ್ನು ಕೇಳದೇ ಕೇವಲ ನಿರ್ಬಂಧಕಾಜ್ಞೆ ಕೋರಿ ಸಲ್ಲಿಸಿದ ದಾವೆ ತಾಂತ್ರಿಕವಾಗಿ ದೋಷಪೂರ್ಣ (Not Maintainable) ಎಂದು ನ್ಯಾಯಾಲಯ ತೀರ್ಮಾನಿಸಿದೆ.


4. ಪ್ರಾರಂಭಿಕ ಹೊಣೆಗಾರಿಕೆ (Burden of Proof)


ನ್ಯಾಯಾಲಯವು ವಾದಿಯು ತನ್ನ ಮಾಲೀಕತ್ವ ಮತ್ತು ಕಾನೂನುಬದ್ಧ ಸ್ವಾಧೀನವನ್ನು ಸಾಬೀತುಪಡಿಸುವ ಪ್ರಾರಂಭಿಕ ಹೊಣೆಗಾರಿಕೆ ವಾದಿಯ ಮೇಲೆಯೇ ಇರುವುದನ್ನು ಸ್ಪಷ್ಟಪಡಿಸಿದೆ.


ಇಲ್ಲಿ, ವಾದಿ ಸಂಘವು:

ಮೂಲ ಮಂಜೂರಾತಿ ಆದೇಶವನ್ನು ಹಾಜರುಪಡಿಸಲಿಲ್ಲ,

ಆಸ್ತಿಯ ಮೂಲ ಸರಕಾರದಿಂದ ಖಾಸಗಿಗೆ ಬದಲಾಗಿರುವ ಕ್ರಮವನ್ನು ಸಾಬೀತುಪಡಿಸಲಿಲ್ಲ,

ಕೇವಲ ಕಂದಾಯ ದಾಖಲೆಗಳ ಮೇಲೆ ಅವಲಂಬಿತವಾಯಿತು.

ಅದರಿಂದ ವಾದಿಯು ತನ್ನ ಪ್ರಾಥಮಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ನಿರ್ಣಯಿಸಿದೆ.


5. ಸರ್ಕಾರಿ ಪರ ಕಾರ್ಯನಿರ್ವಹಿಸುವ ಸಂಸ್ಥೆಗಳ ವಿರುದ್ಧ ನಿರ್ಬಂಧಕಾಜ್ಞೆ


1ನೇ ಪ್ರತಿವಾದಿ ಸಂಸ್ಥೆ ಸರ್ಕಾರದ ನಿರ್ದೇಶನದಂತೆ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವ ಸಂಸ್ಥೆಯಾಗಿದ್ದರಿಂದ, ಸರ್ಕಾರಿ ಭೂಮಿಯ ಮೇಲೆ ಸರ್ಕಾರದ ಪರ ಕಾರ್ಯನಿರ್ವಹಿಸುವ ಸಂಸ್ಥೆಯ ವಿರುದ್ಧ ಕೇವಲ ನಿರ್ಬಂಧಕಾಜ್ಞೆ ಕೋರಿ ದಾವೆ ಸಲ್ಲಿಸುವುದು ಕಾನೂನುಬದ್ಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಂದು ವೇಳೆ ವಾದಿಯು ಕಾನೂನುಬದ್ಧ ಸ್ವಾಧೀನ ಹೊಂದಿದ್ದರೆ, ಅದನ್ನು ರಕ್ಷಿಸುವ ಅವಕಾಶ ಇರುತ್ತಿತ್ತು. ಆದರೆ, ಇಲ್ಲಿನ ಪ್ರಕರಣದಲ್ಲಿ ಅಂತಹ ಸನ್ನಿವೇಶವಿಲ್ಲ ಎಂದು ನ್ಯಾಯಾಲಯ ಕಂಡುಕೊಂಡಿದೆ.


6. ತೀರ್ಪಿನ ಪರಿಣಾಮಗಳು ಮತ್ತು ಕಾನೂನು ಮಹತ್ವ


ಈ ತೀರ್ಪು ಕೆಳಗಿನ ಪ್ರಮುಖ ಕಾನೂನು ತತ್ವಗಳನ್ನು ಮತ್ತೊಮ್ಮೆ ದೃಢಪಡಿಸುತ್ತದೆ:

ಕಂದಾಯ ದಾಖಲೆಗಳು ಮಾಲೀಕತ್ವದ ಅಂತಿಮ ಸಾಕ್ಷ್ಯವಲ್ಲ.

ಸರ್ಕಾರಿ ಪೊರಂಬೊಕು ಭೂಮಿಯ ಮೇಲೆ ಖಾಸಗಿ ಹಕ್ಕು ಪ್ರತಿಪಾದಿಸಲು ಮೂಲ ದಾಖಲೆಗಳು ಅಗತ್ಯ.

ಮಾಲೀಕತ್ವ ವಿವಾದದಲ್ಲಿದ್ದರೆ ಘೋಷಣಾತ್ಮಕ ಪರಿಹಾರ ಕಡ್ಡಾಯ.

ಪ್ರಾರಂಭಿಕ ಹೊಣೆಗಾರಿಕೆ ಸದಾ ವಾದಿಯ ಮೇಲೆಯೇ. ಸರ್ಕಾರಿ ಸಂಸ್ಥೆಗಳ ವಿರುದ್ಧ ದಾವೆ ಸಲ್ಲಿಸುವಾಗ ಮೂಲ ಹಕ್ಕಿನ ಸ್ಪಷ್ಟ ನಿರೂಪಣೆ ಅಗತ್ಯ.


ನಿರ್ಣಯ

ಮಂಗಳೂರು ಪ್ರಧಾನ ಸಿವಿಲ್ ನ್ಯಾಯಾಲಯದ ಈ ತೀರ್ಪು ಭೂ ವಿವಾದಗಳಲ್ಲಿ ಕಾನೂನು ತತ್ವಗಳನ್ನು ಪುನರುಚ್ಚರಿಸುವುದರ ಜೊತೆಗೆ, ಸಾರ್ವಜನಿಕ ಭೂಮಿಯ ರಕ್ಷಣೆ ಮತ್ತು ಕಂದಾಯ ದಾಖಲೆಗಳ ಮಿತಿಯ ಕುರಿತಂತೆ ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಭೂಮಿಯ ಮಾಲೀಕತ್ವದ ದಾವೆಗಳಲ್ಲಿ ಕೇವಲ ಕಂದಾಯ ದಾಖಲೆಗಳ ಮೇಲೆ ಅವಲಂಬಿಸದೇ, ಮೂಲ ಹಕ್ಕು ಮತ್ತು ಕಾನೂನುಬದ್ಧ ಮಂಜೂರಾತಿಯ ಸಾಕ್ಷ್ಯವನ್ನು ಹಾಜರುಪಡಿಸುವ ಅಗತ್ಯವಿದೆ ಎಂಬುದನ್ನು ಈ ತೀರ್ಪು ಸ್ಪಷ್ಟವಾಗಿ ಹೇಳುತ್ತದೆ.


ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ ಆರ್ಥಿಕ ಅವ್ಯವಹಾರವನ್ನು ಅವಗಾಹನಿಸಿದ ಮಂಗಳೂರಿನ ಮಾನ್ಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ದಿನಾಂಕ 17.11.2023 ರಂದು ನೀಡಿದ ತೀರ್ಪಿನಲ್ಲಿ ಆರ್ಥಿಕ ಅವ್ಯವಹಾರ ನಡೆಸಿದ ಪದಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಿತ್ತು.


2019 ರ ವರೆಗೆ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ದಕ್ಷ, ಪ್ರಾಮಾಣಿಕ ಹಾಗೂ ಸಮರ್ಪಣ ಭಾವದ ಸೇವೆಯಿಂದಾಗಿ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘವು ಇಡೀ ರಾಜ್ಯಕ್ಕೆ ಮಾದರಿ ಜಿಲ್ಲಾ ಸಂಘ ಎಂಬ ಖ್ಯಾತಿ ಪಡೆದಿತ್ತು.


2019-2024 ರ ಅವಧಿಗೆ ನಡೆದ ಚುನಾವಣೆಯಲ್ಲಿ ಹಲವಾರು ಅಕ್ರಮಗಳನ್ನು ಎಸಗಿ ಅಧಿಕಾರ ವಹಿಸಿಕೊಂಡ ಆಡಳಿತ ಮಂಡಳಿಯ ಚುನಾವಣೆಯನ್ನು ಮಾನ್ಯ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ಅಸಿಂಧು ಎಂದು ಘೋಷಿಸಿತ್ತು. ಕೂಡಲೇ ಆಡಳಿತ ಮಂಡಳಿಯನ್ನು ಬರ್ಕಾಸ್ತುಗೊಳಿಸಿ ಆಡಳಿತ ಅಧಿಕಾರಿಯನ್ನು ನೇಮಕ ಮಾಡುವುದು ಸಕ್ಷಮ ಪ್ರಾಧಿಕಾರದ ಕರ್ತವ್ಯವಾಗಿತ್ತು. ಆದರೆ ಸಕ್ಷಮ ಪ್ರಾಧಿಕಾರವು ಸಂಘಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಿರಲಿಲ್ಲ.


2024-2029 ರ ಅವಧಿಗೆ ನಡೆದ ಚುನಾವಣೆಯಲ್ಲಿ ನ್ಯಾಯಾಂಗ ಇಲಾಖೆಯ ಪ್ರತಿನಿಧಿಗಳಿಗೆ ಅವಕಾಶ ನೀಡಿ ಪದಾಧಿಕಾರಿಗಳ ಚುನಾವಣೆ ನಡೆಸಬೇಕು ಎಂಬ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಹೈಕೋರ್ಟ್ ಮೆಟ್ಟಲೇರಿ ಮಾನ್ಯ ಕರ್ನಾಟಕ ಹೈಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡು ಆ ಬಳಿಕ ಸುಪ್ರೀಂ ಕೋರ್ಟ್ ನಿಂದಲೂ ಮುಖಭಂಗಕ್ಕೊಳಗಾಗಿ ಹೈಕೋರ್ಟ್ ವಿಧಿಸಿದ ರೂ.5,00,000 ದಂಡವನ್ನು ತಪ್ಪಿತಸ್ಥರು ವೈಯಕ್ತಿಕವಾಗಿ ಪಾವತಿಸದೆ ಸಂಘದಿಂದ ಅಕ್ರಮವಾಗಿ ಪಾವತಿಸಿ ಸಂಘಕ್ಕೆ ವಂಚಿಸಿರುತ್ತಾರೆ.


2019 ರಿಂದ ಇಲ್ಲಿಯವರೆಗೆ ಕಾನೂನುಬಾಹಿರವಾಗಿ ಅಧಿಕಾರಕ್ಕೆ ಅಂಟಿಕೊಂಡು ಕೋಟ್ಯಂತರ ಹಣವನ್ನು ದುರುಪಯೋಗಪಡಿಸಿರುವ ಆಡಳಿತ ಮಂಡಳಿಯ ವಿರುದ್ಧ ಪ್ರಜ್ಞಾವಂತ ಸರಕಾರಿ ನೌಕರರ ಆಕ್ರೋಶ ಭುಗಿಲೆದ್ದಿದೆ.


ಇದೀಗ ನಗರದ ಹೃದಯ ಭಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಹಾಗು ಅದರಲ್ಲಿರುವ ಕಟ್ಟಡ ಸರಕಾರದ ವಶವಾದ ಬಗ್ಗೆ ನೌಕರರಲ್ಲಿ ತೀವ್ರ ಅಸಮಾಧಾನ/ಆಕ್ರೋಶ ಉಂಟಾಗಿದೆ.


ಬಹು ಕೋಟಿ ಹಗರಣಗಳಲ್ಲಿ ಮುಳುಗಿ ವಿಚಾರಣೆ ಎದುರಿಸುತ್ತಿರುವ ರಾಜ್ಯ ಸಂಘದ ಪದಾಧಿಕಾರಿಗಳು ನೀಡಿದ ಬೆಂಬಲದಿಂದ ಈ ಅಸಮರ್ಥ ಆಡಳಿತ ಮಂಡಳಿ 2019 ರಿಂದ ಇಲ್ಲಿಯ ವರೆಗೆ ಅಕ್ರಮವಾಗಿ ಆಡಳಿತಕ್ಕೆ ಅಂಟಿಕೊಂಡು ಪ್ರಾಮಾಣಿಕರು ಮತ್ತು ಪ್ರಜ್ಞಾವಂತ ಸರಕಾರಿ ನೌಕರರ ಜಿಲ್ಲೆಯೆಂದು ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿಗೆ ಮಸಿ ಬಳಿದಿರುವುದು ತೀರಾ ವಿಷಾದನೀಯ ಹಾಗೂ ವೇದನೀಯ ಸಂಗತಿಯಾಗಿದೆ.


ಇದೀಗ ಮಂಗಳೂರಿನ ಹೃದಯ ಭಾಗದಲ್ಲಿರುವ 33 ಸೆಂಟ್ಸ್ ಜಮೀನು ಹಾಗೂ ಕಟ್ಟಡ ಸರಕಾರದ ವಶಕ್ಕೆ ಸೇರಿರುವುದರಿಂದ 2019 ರಿಂದ ಇದುವರೆಗೆ ಸರಕಾರಕ್ಕೆ ಸಲ್ಲತಕ್ಕ ಕೋಟ್ಯಂತರ ರೂಪಾಯಿ ಬಾಡಿಗೆ ಹಣದ ವಿನಿಯೋಗದ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ಒಂದು ವೇಳೆ ಹಣಕಾಸು ದುರುಪಯೋಗ ಸಾಬೀತಾದಲ್ಲಿ ಜಿಲ್ಲಾ ಸಂಘಕ್ಕೆ ಆಡಳಿತ ಅಧಿಕಾರಿಯನ್ನು ನೇಮಕ ಮಾಡಿ ತಪ್ಪಿತಸ್ಥರಿಂದ ಹಣವನ್ನು ವಸೂಲು ಮಾಡಿ ಸರಕಾರಕ್ಕೆ ಜಮೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ ಎಂಬುದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.


Ads on article

Advertise in articles 1

advertising articles 2

Advertise under the article