ಧಾರ್ಮಿಕ ಹಕ್ಕಿಗಿಂತ ರಾಷ್ಟ್ರೀಯ ಭದ್ರತೆ ಮುಖ್ಯವಾದ ವಿಚಾರ: ನಮಾಜ್ಗೆ ಅನುಮತಿ ನಿರಾಕರಣೆ- ಹೈಕೋರ್ಟ್ ಆದೇಶ
ಧಾರ್ಮಿಕ ಹಕ್ಕಿಗಿಂತ ರಾಷ್ಟ್ರೀಯ ಭದ್ರತೆ ಮುಖ್ಯವಾದ ವಿಚಾರ: ನಮಾಜ್ಗೆ ಅನುಮತಿ ನಿರಾಕರಣೆ- ಹೈಕೋರ್ಟ್ ಆದೇಶ
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಭದ್ರತೆ ಧಾರ್ಮಿಕ ಹಕ್ಕಿಗಿಂತ ಮುಖ್ಯವಾದ ವಿಚಾರ ಎಂದು ಬಾಂಬೆ ಹೈಕೋರ್ಟ್ ಪರಿಭಾವಿಸಿದ್ದು, ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಲು ಅವಕಾಶ ಕೋರಿದ ಅರ್ಜಿಯನ್ನು ವಜಾಗೊಳಿಸಿದೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಪ್ರಾರ್ಥನೆ ಸಲ್ಲಿಸಲು ನಿರ್ಮಿಸಿದ್ದ ತಾತ್ಕಾಲಿಕ ಶೆಡ್ಡನ್ನು ಅಧಿಕಾರಿಗಳು ತೆಗೆದುಹಾಕಿದ್ದಾರೆ. ನಮಗೆ ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಅರ್ಜಿಯಲ್ಲಿ ಚಾಲಕರು ಅದೇ ಸ್ಥಳದಲ್ಲಿ ಅಥವಾ ಹತ್ತಿರದ ಯಾವುದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದರು.
ಅರ್ಜಿದಾರರಿಗೆ ಪರ್ಯಾಯ ಸ್ಥಳ ನೀಡಬಹುದೇ ಎಂದು ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಗುರುವಾರ ಸಲ್ಲಿಸಿದ ವರದಿಯಲ್ಲಿ, ಏಳು ಸ್ಥಳಗಳನ್ನು ಸಮೀಕ್ಷೆ ಮಾಡಲಾಗಿದೆ, ಆದರೆ ಜನದಟ್ಟಣೆ, ಭದ್ರತಾ ಕಾಳಜಿ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯಿಂದಾಗಿ ಯಾವುದೂ ಸೂಕ್ತವಾಗಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದರು.
ವರದಿಯನ್ನು ನೋಡಿದ ನಂತರ, ಹೈಕೋರ್ಟ್ ವಿಮಾನ ನಿಲ್ದಾಣದ ಸುತ್ತಲೂ ಪ್ರಾರ್ಥನೆ ಸಲ್ಲಿಸಲು ಯಾವುದೇ ಸ್ಥಳವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅದು ಧರ್ಮವಾಗಲಿ ಅಥವಾ ಇನ್ನೇನೇ ಆಗಿರಲಿ, ಭದ್ರತೆ ಮೊದಲು. ಪ್ರತಿಯೊಂದು ಧರ್ಮದ ಜನರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ, ಆದ್ದರಿಂದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೇ, ಅರ್ಜಿದಾರರು ಬೇರೆ ಸ್ಥಳವನ್ನು ಹುಡುಕಬೇಕೆಂದು ನ್ಯಾಯಾಲಯ ಹೇಳಿದೆ. ಸಂಬಂಧಪಟ್ಟ ಪ್ರದೇಶದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮದರಸಾ ಇದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.