ಕರ್ನಾಟಕ ವಕೀಲರ ಸಮುದಾಯಕ್ಕೆ ಗುಡ್ ನ್ಯೂಸ್! ಮರಣ ಪರಿಹಾರ, ನಿವೃತ್ತಿ ಸೌಲಭ್ಯದಲ್ಲಿ ಭಾರೀ ಬದಲಾವಣೆ
ಕರ್ನಾಟಕ ವಕೀಲರ ಸಮುದಾಯಕ್ಕೆ ಗುಡ್ ನ್ಯೂಸ್! ಮರಣ ಪರಿಹಾರ, ನಿವೃತ್ತಿ ಸೌಲಭ್ಯದಲ್ಲಿ ಭಾರೀ ಬದಲಾವಣೆ
ಕರ್ನಾಟಕ ರಾಜ್ಯದ ವಕೀಲರ ಸಮುದಾಯಕ್ಕೆ ಒಂದು ಗುಡ್ ನ್ಯೂಸ್ ! ವಕೀಲರ ಮರಣ ಪರಿಹಾರ ಹಾಗೂ ನಿವೃತ್ತಿ ಸೌಲಭ್ಯದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಪ್ರಸ್ತಾವನೆಗೆ ಅನುಕೂಲವಾಗುವಂತೆ ಮೂಲನಿಧಿ ಸ್ಥಾಪಿಸಲು ಯೋಜನೆ ಹಾಕಲಾಗಿದೆ.
ಕರ್ನಾಟಕ ವಕೀಲರ ಕ್ಷೇಮನಿಧಿಯ ಅಡಿ ನೀಡಲಾಗುತ್ತಿರುವ ಮರಣ ಪರಿಹಾರ ಹಾಗೂ ನಿವೃತ್ತಿ ಸೌಲಭ್ಯದ ಮೊತ್ತ ಹೆಚ್ಚಳ ಮಾಡುವ ಜೊತೆಗೆ ವಕೀಲರಿಗೆ ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದ ಸರ್ಕಾರಿ ಕಾರ್ಯಕ್ರಮ ರೂಪಿಸಲು ಈ ಮೂಲನಿಧಿ ಬಳಕೆ ಮಾಡುವ ಚಿಂತನೆ ಇದೆ ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಖಾಸಗಿ ವಕೀಲರು ಮತ್ತು ಅವರ ಕುಟುಂಬದವರಿಗೆ ಸರ್ಕಾರಿ ನೌಕರರ ಮಾದರಿಯಲ್ಲಿ ಅಥವಾ ವಿಶೇಷ ಯೋಜನೆಯಡಿ ರಿಯಾಯಿತಿ ದರದ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವ ಸರ್ಕಾರದ ಮುಂದಿದೆಯೇ? ಹಾಗೂ ಈ ಯೋಜನೆಯನ್ನು ಧಾರವಾಡ ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಸದಸ್ಯರಿಗೆ ವಿಸ್ತರಿಸಲಾಗುವುದೇ? ಎಂದು ಸದಸ್ಯರೊಬ್ಬರು ಸದನದಲ್ಲಿ ಕಾನೂನು ಸಚಿವರಿಗೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿದ ಕಾನೂನು ಸಚಿವರು, ನಿವೃತ್ತಿ ಸೌಲಭ್ಯ ಹಾಗೂ ಮರಣ ಪರಿಹಾರದಲ್ಲಿ ಭಾರೀ ಏರಿಕೆಯಾಗುವಂತೆ ಹಾಗೂ ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುವಾಗುವಂತೆ ಮೂಲನಿಧಿ ಸ್ಥಾಪಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದರು.
ನವ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ ಪಾವತಿಸುವ ಯೋಜನೆಯನ್ನು ಮುಂದುವರಿಸಲಾಗಿದೆ. ಅದರ ಭಾಗವಾಗಿ ಧಾರವಾಡ ಜಿಲ್ಲೆಯ 23 ನವ ಕಾನೂನು ಪದವೀಧರರು ಯೋಜನೆಯಡಿ ಆಯ್ಕೆಯಾಗಿದ್ದಾರೆ. ಈ ಯೋಜನೆಯಡಿ ವಾರ್ಷಿಕ ವರಮಾನ ಪುನರ್ ಪರಿಶೀಲಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ತಿಳಿಸಿದೆ.