ಕರ್ನಾಟಕ ಹೈಕೋರ್ಟ್ಗೆ 3 ನ್ಯಾಯಮೂರ್ತಿಗಳ ನೇಮಕ, 61 ಸಿವಿಲ್ ನ್ಯಾಯಾಧೀಶರ ಪ್ರಮಾಣವಚನ
ಕರ್ನಾಟಕ ಹೈಕೋರ್ಟ್ಗೆ 3 ನ್ಯಾಯಮೂರ್ತಿಗಳ ನೇಮಕ, 61 ಸಿವಿಲ್ ನ್ಯಾಯಾಧೀಶರ ಪ್ರಮಾಣವಚನ
ಕರ್ನಾಟಕ ಹೈಕೋರ್ಟ್ನಲ್ಲಿ ಹಾಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ವರಿ ನಾರಾಯಣ ಹೆಗ್ಡೆ, ಕೆದಂಬಾಡಿ ಗಣೇಶ ಶಾಂತಿ ಮತ್ತು ಬೃಂಗೇಶ್ ಮಹಾದೇವಪ್ಪ ಅವರನ್ನು ಕರ್ನಾಟಕ ಹೈಕೋರ್ಟ್ ನ ನೂತನ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್ನ ಕೊಲಿಜಿಯಂ ಕಳೆದ ಏಪ್ರಿಲ್ನಲ್ಲಿ ಮಾಡಿದ್ದ ಶಿಫಾರಸು ಆಧರಿಸಿ ರಾಷ್ಟ್ರಪತಿ ಸಂವಿಧಾನದ 224ನೇ ವಿಧಿಯ ಷರತ್ತು (1)ರ ಮೂಲಕ ಅಧಿಕಾರ ಚಲಾಯಿಸಿ ಈ ನೇಮಕಾತಿ ಮಾಡಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.
ರಾಜೇಶ್ವರಿ ನಾರಾಯಣ ಹೆಗ್ಡೆ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಅವರು ನಿವೃತ್ತಿಯಾಗುವ 2028ರ ಮಾರ್ಚ್ 17ರ ವರೆಗೆ ಹಾಗೂ ಕೆದಂಬಾಡಿ ಗಣೇಶ ಶಾಂತಿ ಮತ್ತು ಬೃಂಗೇಶ್ ಮಹಾದೇವಪ್ಪ ಅವರನ್ನು 2 ವರ್ಷಗಳ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.
ಹೈಕೋರ್ಟ್ನಲ್ಲಿ ಸದ್ಯ ಮುಖ್ಯ ನ್ಯಾಯಮೂರ್ತಿಗಳನ್ನು ಸೇರಿಸಿ 45 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳೂ ಸೇರಿದಂತೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿವೆ. ಈಗ ಮೂವರು ನ್ಯಾಯಮೂರ್ತಿಗಳು ನೇಮಕಗೊಂಡರೂ ಇನ್ನೂ 14 ಹುದ್ದೆಗಳು ಖಾಲಿ ಇವೆ.
61 ಸಿವಿಲ್ ನ್ಯಾಯಾಧೀಶರ ಪ್ರಮಾಣವಚನ
ರಾಜ್ಯದ ನ್ಯಾಯಾಂಗ ಸೇವೆಗೆ ನೇರ ನೇಮಕಾತಿ ಮೂಲಕ ಹೊಸದಾಗಿ ನೇಮಕಗೊಂಡ 61 ಮಂದಿ ಸಿವಿಲ್ ನ್ಯಾಯಾಧೀಶರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಅವರು ನೂತನ ಸಿವಿಲ್ ನ್ಯಾಯಾಧೀಶರಿಗೆ ಅಧಿಕಾರ ಹಾಗೂ ಗೋಪತೆಯ ಪ್ರಮಾಣ ವಚನ ಬೋಧಿಸಿದರು.
ಈ 61 ಮಂದಿ ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅನುಮೋದನೆಯಂತೆ ಕಾನೂನು ಇಲಾಖೆ ಮೇ 25ರಂದು ಅಧಿಸೂಚನೆ ಹೊರಡಿಸಿತ್ತು.