ಮಂಗಳೂರಲ್ಲಿ ಹೈ ಪೀಠ ಪ್ರಸ್ತಾಪಕ್ಕೆ ಬೆಂಗಳೂರು ವಕೀಲರ ವಿರೋಧ; ಕರಾವಳಿಯಲ್ಲಿ ಬಿರುಸಿನ ಪ್ರತಿ ಅಭಿಯಾನ
ಮಂಗಳೂರಲ್ಲಿ ಹೈ ಪೀಠ ಪ್ರಸ್ತಾಪಕ್ಕೆ ಬೆಂಗಳೂರು ವಕೀಲರ ವಿರೋಧ; ಕರಾವಳಿಯಲ್ಲಿ ಬಿರುಸಿನ ಪ್ರತಿ ಅಭಿಯಾನ
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠದ ಪ್ರಸ್ತಾಪಕ್ಕೆ ಬೆಂಗಳೂರು ವಕೀಲರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಮಂಗಳೂರು, ಉಡುಪಿ, ಬಂಟ್ವಾಳ, ಪುತ್ತೂರು ಸಹಿತ ವಿವಿಧ ವಕೀಲರ ಸಂಘಗಳ ನೇತೃತ್ವದಲ್ಲಿ ಕರಾವಳಿಯಲ್ಲಿ ಬಿರುಸಿನ ಪ್ರತಿ ಅಭಿಯಾನ ನಡೆದಿದೆ.
ರಾಜ್ಯದ ಬಂದರು ನಗರಿ ಎಂದು ಪ್ರಖ್ಯಾತಿ ಪಡೆದ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕಾಗಿ ಅಗತ್ಯವಾದ 50,000 ಚದರ ಅಡಿ ಜಾಗವನ್ನು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಕಳೆದ ಮೇ 13ರಂದು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು, ಈ ಪತ್ರದಲ್ಲಿ ಮಂಗಳೂರು ಸಂಚಾರಿ ಪೀಠದ ಪ್ರಸ್ತಾಪವನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು. ಹೈ-ಪೀಠದ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರದಿಂದ ಸರ್ವರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು.
ಮಂಗಳೂರಿನಲ್ಲಿ ಹೈಕೋರ್ಟ್ನ ಸಂಚಾರಿ ಪೀಠ ಆರಂಭವಾದರೆ ಕರಾವಳಿ ಜಿಲ್ಲೆಗಳಲ್ಲಿ ನ್ಯಾಯದಾನ ಪ್ರಕ್ರಿಯೆ ಸುಲಲಿತವಾಗಲಿದ್ದು, ಕೋಟ್ಯಂತರ ಮಂದಿಗೆ ಪ್ರಯೋಜನವಿದೆ. ಇದೇ ವೇಳೆ, ಬೆಂಗಳೂರು ಪ್ರಧಾನ ಪೀಠದ ಮೇಲಿನ ಒತ್ತಡ ಗಣನೀಯವಾಗಿ ತಗ್ಗಲಿದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ವಿವರಿಸಿದ್ದರು.
ಈ ಪ್ರಸ್ತಾವಕ್ಕೆ ಬೆಂಗಳೂರು ವಕೀಲರ ಸಂಘ ವಿರೋಧ ವ್ಯಕ್ತಪಡಿಸಿದೆ. ಮೇ 18ರಂದು ಸಿಜೆಗೆ ಬರೆದಿರುವ ಪತ್ರದಲ್ಲಿ ಎಎಬಿಯು ಮಂಗಳೂರು ಸಂಚಾರಿ ಪೀಠ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಕೋರಿದೆ.
ಇದಕ್ಕೆ ಪ್ರತಿಯಾಗಿ, ಕರಾವಳಿ ಜಿಲ್ಲೆಗಳಲ್ಲಿ ಪ್ರತಿ ಅಭಿಯಾನ ಆರಂಭವಾಗಿದ್ದು, ಸಿಜೆಗೆ ಪತ್ರ ಬರೆಯುವ ಮೂಲಕ ವಕೀಲರ ಸಂಘಗಳು ಬಿರುಸಿನ ಚಟುವಟಿಕೆ ನಡೆಸಿದವು.