ಸಿಮ್ ಸ್ವ್ಯಾಪ್ ವಂಚನೆ: ನಕಲಿ ಸಿಮ್ ನೀಡುವ ಟೆಲಿಕಾಂ ಕಂಪೆನಿಗಳೇ ಸಂಪೂರ್ಣ ಹೊಣೆ- ಕರ್ನಾಟಕ ಹೈಕೋರ್ಟ್
ಸಿಮ್ ಸ್ವ್ಯಾಪ್ ವಂಚನೆ: ನಕಲಿ ಸಿಮ್ ನೀಡುವ ಟೆಲಿಕಾಂ ಕಂಪೆನಿಗಳೇ ಸಂಪೂರ್ಣ ಹೊಣೆ- ಕರ್ನಾಟಕ ಹೈಕೋರ್ಟ್
ನಿರ್ಲಕ್ಷ್ಯದಿಂದ ನಕಲಿ ಸಿಮ್ಗಳನ್ನು ನೀಡುವ ಮೂಲಕ ಸಿಮ್ ಸ್ವ್ಯಾಪ್ ವಂಚನೆಗೆ ದಾರಿ ಮಾಡಿಕೊಟ್ಟರೆ, ಅದರಿಂದಾಗುವ ಹಣದ ನಷ್ಟಕ್ಕೆ ಟೆಲಿಕಾಂ ಸೇವಾ ಸಂಸ್ಥೆಗಳೇ ನೇರ ಸಂಪೂರ್ಣ ಹೊಣೆಯಾಗಲಿವೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್ನ ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
“ಡಿಜಿಟಲ್ ಹಣಕಾಸು ವಹಿವಾಟಿನ ಇಂದಿನ ಯುಗದಲ್ಲಿ, ನಕಲಿ ಸಿಮ್ ಅನ್ನು ಬದಲಾಯಿಸುವ ಅಥವಾ ನೀಡುವ ಮೊದಲು ಚಂದಾದಾರರ ಗುರುತನ್ನು ಪರಿಶೀಲಿಸುವುದು ಕೇವಲ ಖಾಲಿ ಔಪಚಾರಿಕತೆಯಲ್ಲ. ಬದಲಾಗಿ, ಅದೊಂದು ಗುರುತರ ಹೊಣೆಗಾರಿಕೆ” ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ:
ಬಿಎಸ್ಎನ್ಎಲ್ ಸಿಮ್ ಹೊಂದಿರುವ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಿಮ್ ಸ್ವ್ಯಾಪ್ ವಂಚನೆಯಿಂದ 2019ರಲ್ಲಿ 87 ಲಕ್ಷ ರೂ. ಕಳೆದುಕೊಂಡಿತ್ತು. ಇದು ಸಿಮ್ ನೀಡುವ ಮುನ್ನ ನಡೆಸುವ ಸೆಕ್ಯೂರಿಟಿ ಚೆಕ್ಅಪ್ ಮಾಡುವಲ್ಲಿ ಆದ ನಿರ್ಲಕ್ಷ್ಯ. ಟೆಲಿಕಾಂ ಕಂಪೆನಿಯ ಕರ್ತವ್ಯ ಲೋಪದಿಂದ ಸಿಮ್ ವಂಚಕರ ಕೈ ಸೇರಿದೆ. ಇದಕ್ಕೆ ಟೆಲಿಕಾಂ ಕಂಪೆನಿಯೇ ಹೊಣೆ ಎಂದು ನ್ಯಾಯಾಲಯದ ಹೇಳಿದೆ.
ಟೆಲಿಕಾಂ ಕಂಪೆನಿಯಾದ ಬಿಎಸ್ಎನ್ಎಲ್ ಸೂಕ್ತ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದರೆ ಅಧಿಕೃತ ಸಿಮ್ ಬೇರೊಬ್ಬರ ಕೈ ಸೇರುತ್ತಿರಲಿಲ್ಲ. ಮತ್ತು, ಈ ಕಾರಣದಿಂದ ಸೈಬರ್ ವಂಚನೆ ನಡೆಯುತ್ತಿರಲಿಲ್ಲ. ಡೂಪ್ಲಿಕೇಟ್ ಸಿಮ್ ಚಂದಾದಾರಲ್ಲದವರ ಕೈ ಸೇರಿದೆ ಎಂಬ ಅಂಶವನ್ನು ಕಂಪೆನಿ ಪರಿಶೀಲನೆ ನಡೆಸಿಲ್ಲ. ಅಥವಾ, ಅದರ ಪರಿಶೀಲನೆ ಪರಿಣಾಮಕಾರಿಯಾಗಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ನ್ಯಾಯಪೀಠ ಹೇಳಿದೆ.
ಆ ಕಾರಣದಿಂದ, ನಷ್ಟ ವಸೂಲಿ ಮಾಡದಿದ್ದರೆ, 50.5 ಲಕ್ಷ ರೂ. ಹಣವನ್ನು ಪರಿಹಾರವಾಗಿ ಬಿಎಸ್ಎನ್ಎಲ್ ಕಂಪೆನಿ ನೀಡಬೇಕು. ಸೈಬರ್ ವಂಚನೆಯಿಂದ ಆಗಿರುವ ಸಮಸ್ಯೆಗೆ ಪರಿಹಾರವಾಗಿ ಐದು ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.