ಸುಪ್ರೀಂ ಕೋರ್ಟಲ್ಲಿ ವಕೀಲನ ರಂಪಾಟ: ಜಡ್ಜ್ ಮುಖಕ್ಕೆ ಕಾಗದ ಎಸೆದು ಅವಾಚ್ಯ ನಿಂದನೆ: ಆಮೇಲೇನಾಯ್ತು?
ಸುಪ್ರೀಂ ಕೋರ್ಟಲ್ಲಿ ವಕೀಲನ ರಂಪಾಟ: ಜಡ್ಜ್ ಮುಖಕ್ಕೆ ಕಾಗದ ಎಸೆದು ಅವಾಚ್ಯ ನಿಂದನೆ: ಆಮೇಲೇನಾಯ್ತು?
ಸುಪ್ರೀಂ ಕೋರ್ಟಲ್ಲಿ ವಕೀಲರೊಬ್ಬರು ರಂಪಾಟ ಮಾಡಿದ ಘಟನೆ ನಡೆದಿದೆ. ನ್ಯಾಯಮೂರ್ತಿಗಳ ಕಡೆಗೆ ಪ್ರಕರಣದ ಕಾಗದ ಪತ್ರಗಳನ್ನು ಎಸೆದು ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ ಘಟನೆಗೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಹಾಗೂ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಕೀಲ ಪ್ರಬಲ್ ಪ್ರತಾಪ್ ಕೋರ್ಟ್ ಹಾಲ್ನಲ್ಲೇ ರಂಪಾಟ ಮಾಡಿದ ವಕೀಲ.
ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ಈ ಹೈಡ್ರಾಮಾ ನಡೆದಿದೆ. ಕೋರ್ಟ್ನಲ್ಲಿ ಖುದ್ದು ಹಾಜರಾಗಿದ್ದ ಅರ್ಜಿದಾರರೊಬ್ಬರು ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಕಡೆಗೆ ಕಾಗದಗಳನ್ನು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ರಂಪಾಟ ಮಾಡಿದ್ದಾರೆ.
ವಿಚಾರಣೆ ವೇಳೆ "ನ್ಯಾಯಾಂಗದ ಪ್ರಧಾನ ಸೇವಕರೇ, ಸೈಬರ್ ಅಪರಾಧ ಎಸಗಿರುವ ಲಖನೌ ವಿಕಾಶ್ ನಗರದ ಎಸಿಪಿ ಮತ್ತು ಡುಪ್ಲೆಕ್ಸ್ ಟೆಕ್ನಾಲಜಿ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ನಿಮಗೆ ಆದೇಶಿಸುತ್ತಿದ್ದೇನೆ. ಯಾಕೆಂದರೆ ನಾನು ಸಾರ್ವಭೌಮ'' ಎಂದು ಪ್ರಬಲ್ ಪ್ರತಾಪ್ ಹೇಳಿದರು.
ಇದನ್ನು ಕೇಳಿದ ನ್ಯಾಯಪೀಠ, "ನೀವು ನಮಗೆ ಆದೇಶ ನೀಡುತ್ತಿದ್ದೀರಾ?" ಎಂದು ನ್ಯಾಯಮೂರ್ತಿ ವಿಶ್ವನಾಥನ್ ಅವರು ಖಾರವಾಗಿ ಪ್ರಶ್ನಿಸಿದರು. ಕುಪಿತ ಗೊಂಡ ಪ್ರಬಲ್, ನ್ಯಾಯಮೂರ್ತಿಗಳ ಕಡೆಗೆ ಕಾಗದ ಪತ್ರಗಳನ್ನು ಎಸೆದು, ಅವಾಚ್ಯವಾಗಿ ನಿಂದಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ರಂಪಾಟ ನಡೆಸಿದ ವಕೀಲರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸಿದರು.
"ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆಯಂತಹ ಯಾವುದೇ ಕ್ರಮವನ್ನು ನಾವು ಕೈಗೊಳ್ಳುವುದಿಲ್ಲ, ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಅರ್ಜಿಯನ್ನು ವಜಾಗೊಳಿಸಿದ್ದೇವೆ'' ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು.