ಸರ್ಕಾರಿ ನೌಕರರ ವರ್ಗಾವಣೆಗೆ ಹೊಸ ರೂಲ್ಸ್: ಸ್ಥಳ ನಿಯುಕ್ತಿ ಕಡ್ಡಾಯ ಸುತ್ತೋಲೆ
ಸರ್ಕಾರಿ ನೌಕರರ ವರ್ಗಾವಣೆಗೆ ಹೊಸ ರೂಲ್ಸ್: ಸ್ಥಳ ನಿಯುಕ್ತಿ ಕಡ್ಡಾಯ ಸುತ್ತೋಲೆ
ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯನ್ನು ವರ್ಗಾವಣೆ ಮಾಡುವಾಗ ಸ್ಥಳ ನಿಯುಕ್ತಿಗೊಳಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
'ಸಾರ್ವತ್ರಿಕ ವರ್ಗಾವಣೆ, ಆಡಳಿತಾತ್ಮಕ ಮತ್ತಿತರ ಕಾರಣಗಳಿಗಾಗಿ ವರ್ಗಾವಣೆ ಮಾಡುವಾಗಲೂ ಯಾವುದೇ ಅಧಿಕಾರಿ, ಸಿಬ್ಬಂದಿಗೆ ಸ್ಥಳ ನೀಡದೆ ಕಾಯುವಂತೆ ಮಾಡಬಾರದು. ಸೂಚನೆಯನ್ನು ಉಲ್ಲಂಘಿಸಿ ಸ್ಥಳ ನಿಯುಕ್ತಿ ನೀಡದೆ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಿದರೆ ಅಂತಹ ಅಧಿಕಾರಿ, ನೌಕರರಿಗೆ ನಿರೀಕ್ಷಣೆಯ ಅವಧಿಯಲ್ಲಿ ಪಾವತಿಸಿದ ವೇತನ ಮತ್ತು ಭತ್ಯೆಯನ್ನು ಸಂಬಂಧಿತ ಸಕ್ಷಮ ಪ್ರಾಧಿಕಾರಗಳಿಂದ ವಸೂಲಿ ಮಾಡಲಾಗುವುದು' ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತನ್ನ ಸುತ್ತೋಲೆಯಲ್ಲಿ ಹೇಳಿದೆ.
'ನೌಕರರ ವಿರುದ್ಧ ಗುರುತರ ಆರೋಪ, ಲೋಕಾಯುಕ್ತ, ಪೊಲೀಸ್ ಹಾಗೂ ಇಲಾಖಾ ವಿಚಾರಣೆ ನಡೆಯುತ್ತಿದ್ದರೆ ವರ್ಗಾವಣೆಯಾದವರನ್ನು ಗರಿಷ್ಠ ಒಂದು ತಿಂಗಳವರೆಗೆ ಮಾತ್ರ ಸ್ಥಳ ನಿರೀಕ್ಷಣೆಯಲ್ಲಿ ಇರಿಸಬಹುದು. ಅದಕ್ಕಿಂತ ಹೆಚ್ಚು ಅವಧಿ . ಅಗತ್ಯವಿದ್ದರೆ ಸೂಕ್ತ ಕಾರಣಗಳನ್ನು ನೀಡಿ, ಮುಖ್ಯಮಂತ್ರಿ ಅವರ ಅನುಮೋದನೆ ಪಡೆಯಬೇಕು' ಎಂದೂ ಸುತ್ತೋಲೆ ವಿವರಿಸಿದೆ.
'ಯಾವುದೇ ಸರ್ಕಾರಿ ನೌಕರರ ವರ್ಗಾವಣೆಯಾದ ಸಂದರ್ಭಗಳಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯದಂತೆ ಕಡ್ಡಾಯವಾಗಿ ಮುಂದಿನ ಹುದ್ದೆ ತೋರಿಸಬೇಕು ಎಂದು ಈ ಹಿಂದೆಯೂ ಸ್ಪಷ್ಟವಾದ ಸೂಚನೆ ನೀಡಲಾಗಿದೆ. ಆದರೂ, ಕೆಲವು ಇಲಾಖೆಗಳು ಪಾಲನೆ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಆದೇಶ ಪಾಲಿಸದ ಸಕ್ಷಮ ಪ್ರಾಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಲಾಗಿದೆ.